ಬೆಂಗಳೂರು: ಉಪ ಮುಖ್ಯಮಂತ್ರಿಗಾಗಿ ಜೀರೋ ಟ್ರಾಫಿಕ್ ಮಾಡಲು ಹೋಗಿ, ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಟೋಲ್ ಗಳಲ್ಲಿ ಫುಲ್ ಟ್ರಾಫಿಕ್ ಜಾಂ ಉಂಟಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲದ ನವಯುಗ ಹಾಗೂ ಜಾಸ್ ಟೋಲ್ ಗಳಲ್ಲಿ ವಾಹನ ಸವಾರರು ಜಾಮ್ ನಿಂದ ಹೈರಾಣಾಗಿದ್ದಾರೆ. ಡಿಸಿಎಂ ಡಾ. ಜಿ ಪರಮೇಶ್ವರ್ ಕೊರಟಗೆರೆಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರಿಂದ ಜೀರೋ ಟ್ರಾಫಿಕ್ ಮಾಡಲಾಗಿತ್ತು.
ಅಷ್ಟೇ ಅಲ್ಲದೇ ರಂಜಾನ್ ಹಬ್ಬದ ರಜೆ ಹಾಗೂ ವಾರಾಂತ್ಯದ ರಜೆ ಮುಗಿಸಿಕೊಂಡು, ಜನರು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದು, ಅಧಿಕ ದಟ್ಟಣೆ ಉಂಟಾಗಿ, ಟೋಲ್ ಗಳಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ. ಸುಮಾರು ಹೆದ್ದಾರಿಯಲ್ಲಿ ಐದಾರು ಕಿಲೋಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇನ್ನೂ ಸಂಚಾರ ದಟ್ಟಣೆ ನಿಯಂತ್ರಿಸಲು ನೆಲಮಂಗಲ ಸಂಚಾರಿ ಪೊಲೀಸರು, ಟೌನ್ ಪೊಲೀಸರು ಹಾಗೂ ಮಾದನಾಯಕನಹಳ್ಳಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಒಟ್ಟಿನಲ್ಲಿ ಉಪಮುಖ್ಯಮಂತ್ರಿಯಿಂದಾಗಿ ಬೆಂಗಳೂರಿಗೆ ತೆರಳಲು ಸವಾರರು ಪರದಾಡುವಂತಾಗಿತ್ತು.