ಬೆಂಗಳೂರು: ಸಿಲಿಕಾನ್ ಸಿಟಿಯ ಹಲೆವೆಡೆ ಇಂದು ಧಾರಾಕಾರ ಮಳೆ ಸುರಿದಿದ್ದು, ವಾಹನ ಸವಾರರು ಪರದಾಟ ಅನುಭವಿಸಿದರು.
ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಮಳೆರಾಯ ಶ್ರೀನಗರ, ಹನುಮಂತನಗರ, ಗಾಂಧಿ ಬಜಾರ್, ಚಾಮರಾಜ ಪೇಟೆ, ಬಸವನಗುಡಿ, ಬುಲ್ ಟೆಂಪಲ್, ಗಿರಿನಗರ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಆಶೋಕ ಪಿಲ್ಲರ್, ಜಯನಗರ, ಸೌತೆಂಡ್ ಸರ್ಕಲ್, ಜೆಪಿನಗರ ಸುತ್ತಮುತ್ತ ಕೂಡ ಭಾರೀ ಮಳೆಯಾಗಿದೆ. ಏಕಾಏಕಿ ಮಳೆ ಬಂದ ಪರಿಣಾಮ ವಾಹನ ಸವಾರರು ಕೆಲ ಕಾಲ ಪರದಾಟ ಅನುಭವಿಸಿದರು.
ಭಾರೀ ಮಳೆಗೆ ಗಾಂಧಿ ಬಜಾರ್, ಶ್ರೀನಗರ ಮುಖ್ಯ ರಸ್ತೆ, ಆಶ್ರಮ ಸರ್ಕಲ್ ರಸ್ತೆ ಕೆರೆಯಂತಾಗಿದೆ. ಪರಿಣಾಮ ದ್ವಿಚಕ್ರ, ಆಟೋ ವಾಹನ ಸವಾರರ ಪರದಾಟ ಅನುಭವಿಸಿದರು. ಅಲ್ಲದೆ ಮಳೆಯಿಂದಾಗಿ ವಾಹನ ಸವಾರರು ಬಸ್ ನಿಲ್ದಾಣ ಅಂಗಡಿಗಳ ಬಳಿ ಆಶ್ರಯ ಪಡೆದರು. ದ್ವಿಚಕ್ರ ವಾಹನಗಳು ಸಂಪೂರ್ಣ ಜಲಾವೃತಗೊಂಡಿವೆ. ಅಲ್ಲದೆ ಹೂ, ತರಕಾರಿಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಚಾಮರಾಜಪೇಟೆ ನಾಲ್ಕನೇ ಮುಖ್ಯ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಹಲವು ಅಂಗಡಿಗಳ ಮುಂದೆ ನೀರು ನಿಂತಿದ್ದು, ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಮುಳುಗಿ ಹೋಗಿವೆ. ಇದನ್ನೂ ಓದಿ: ಮಂಗಳಮುಖಿಯರ ಪಾದಪೂಜೆ ಮಾಡುವ ಮೂಲಕ ದೀಪಾವಳಿ ಆಚರಿಸಿದ ವಿನಯ್ ಗುರೂಜಿ
ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ನವರಂಗ, ಸುಬ್ರಹ್ಮಣ್ಯ ನಗರ, ಶಿವನಹಳ್ಳಿ, ರಾಜ್ ಕುಮಾರ್ ರಸ್ತೆ ಸೇರಿದಂತೆ ಹಲವೆಡೆ ಮಳೆಯಾಗಿದೆ. ಚಾಮರಾಜಪೇಟೆಯ ಜಿಂಕೆ ಪಾರ್ಕ್ ಬಳಿ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲ ಜಲಾವೃತಗೊಂಡಿವೆ. ಮಳೆ ನೀರು ಹೊರ ಹಾಕಲು ಕುಟುಂಬಸ್ಥರು ಹರಸಾಹಸ ಪಟ್ಟರು. ಇತ್ತ ಕೆ ಪಿ ಅಗ್ರಹಾರದಲ್ಲಿ ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಶಾಂತಿನಗರ ಬಸ್ ನಿಲ್ದಾಣದ ಎರಡೂ ಕಡೆಯ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಕೆರೆಯಂತಾದ ರಸ್ತೆಗಳಲ್ಲೇ ವಾಹನಗಳು ಸಂಚರಿಸಿದವು.