ಬೆಂಗಳೂರು: ರಾಯಚೂರು, ಗದಗ, ಹಾವೇರಿ ಸೇರಿದಂತೆ ರಾಜ್ಯದ ವಿವಿಧೆಡೆ ಇಂದು ಭಾರೀ ಮಳೆಯಾಗಿದ್ದು, ರಾಯಚೂರು ಜಿಲ್ಲೆಯಲ್ಲಿ ಸಿಡಿಲು ಬಡಿದು 21 ಕುರಿ, ಒಂದು ಎತ್ತು ಸಾವನ್ನಪ್ಪಿದೆ.
ರಾಯಚೂರು ಜಿಲ್ಲೆಯ ವಿವಿಧಡೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ದೇವದುರ್ಗ ತಾಲೂಕಿನ ಕುರ್ಲೇರ ದೊಡ್ಡಿಯಲ್ಲಿ ಸಿಡಿಲು ಬಡಿದು 10ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಮಲ್ಲಯ್ಯ ಎಂಬವರು ತಮ್ಮ ಕುರಿಗಳನ್ನ ಮೇಯಿಸಲು ಹೋದಾಗ ಮಧ್ಯಾಹ್ನ ವೇಳೆ ಘಟನೆ ನಡೆದಿದೆ. ಮಾನ್ವಿ ತಾಲೂಕಿನ ಕಾತರ್ಕಿಯಲ್ಲಿ ಕೊರವಿ ಗ್ರಾಮದ ಹನುಮಂತ ಎಂಬವರಿಗೆ ಸೇರಿದ 11 ಕುರಿಗಳು ಸಿಡಿಲಿಗೆ ಬಲಿಯಾಗಿವೆ.
ಲಿಂಗಸುಗೂರಿನ ಮುದಗಲ್ ಸಮೀಪದ ಕೆ.ಮರಿಯಮ್ಮನಹಳ್ಳಿಯಲ್ಲಿ ಸಿಡಿಲು ಬಡಿದು ಒಂದು ಎತ್ತು ಸಾವನ್ನಪ್ಪಿದೆ. ಪ್ರಕಾಶಪ್ಪ ಎನ್ನುವ ರೈತನಿಗೆ ಸೇರಿದ್ದ ಎತ್ತು ಸಿಡಿಲಿಗೆ ಬಲಿಯಾಗಿದೆ. ಜಮೀನಿನಲ್ಲಿ ಬೇವಿನ ಮರದ ಕೆಳಗೆ ಕಟ್ಟಿ ಹಾಕಲಾಗಿದ್ದ ಎರಡು ಎತ್ತುಗಳಲ್ಲಿ ಒಂದು ಸಾವನ್ನಪ್ಪಿದೆ. ಎತ್ತು ಕಳೆದುಕೊಂಡ ರೈತ ಕಂಗಾಲಾಗಿದ್ದಾರೆ. ಜಿಲ್ಲೆಯ ಹಲವು ಕಡೆ ಗುಡುಗು ಸಹಿತ ಮಳೆಯಾಗಿದ್ದು, ಮಳೆಯ ವೇಳೆ ಸಿಂಧನೂರಿನ ಬಾದರ್ಲಿಯಲ್ಲಿ ಸಿಡಿಲು ಬಡಿದು ತೆಂಗಿನ ಗಿಡಕ್ಕೆ ಬೆಂಕಿ ಬಿದ್ದು ಹಾಳಾಗಿದೆ.
ಗದಗ: ತಾಲೂಕಿನ ಹರ್ಲಾಪುರ ಭಾಗದಲ್ಲಿ ಸುರಿದ ಆಲಿಕಲ್ಲು ಮಳೆಯ ಆರ್ಭಟಕ್ಕೆ ಜನ ನಲುಗಿಹೋಗಿದ್ದಾರೆ. ಸತತ ಒಂದು ಗಂಟೆಕಾಲ ಆಲಿಕಲ್ಲು, ಬಿರುಗಾಳಿ, ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.
ಕಲ್ಲಿನಂತೆ ರಪರಪನೆ ಬಿದ್ದ ಆಲಿಕಲ್ಲು ನೋಡಿ ಜನ ಆಶ್ಚರ್ಯ ಚಕಿತರಾಗಿದ್ದರು. ಕೆಲವರು ಕೆಲಕಾಲ ಬೊಗಸೆಯಲ್ಲಿ ಆಲಿಕಲ್ಲು ಹಿಡಿದುಕೊಂಡು ಖುಷಿಪಟ್ಟರು. ಕೆಲವರು ಆಲಿಕಲ್ಲಿನ ರಭಸಕ್ಕೆ ಓಡಿ ಗೂಡುಸೇರಿದರು. ಬಿಸಿಲುನಲ್ಲಿ ಬೆಂದ ಜನರಿಗೆ ಒಂದುಕಡೆ ತಂಪೆರೆದಂತಾದ್ರೆ, ಮತ್ತೊಂದು ಕಡೆ ಆಲಿಕಲ್ಲು ಅಪಾಯ ತಂದಂತಿದೆ.
ಭರಣಿ ಮಳೆಯ ಕೊನೆಯ ಕ್ಷಣದಲ್ಲಿ ದೊಡ್ಡ ಪ್ರಮಾಣದ ಆಲಿಕಲ್ಲು ಸುರಿಸಿಹೋಗಿದೆ. ಇದರಿಂದ ರೈತಾಪಿಕುಲ ಚಿಂತೆಗಿಡುಮಾಡಿದೆ. ಯಾಕೆಂದರೆ ಆಲಿಕಲ್ಲು ಮಳೆಯಾದರೆ ಮುಂದೆ ಸಕಾಲಕ್ಕೆ ಮಳೆಯಾಗಲ್ಲ. ಸರಿಯಾಗಿ ಬೆಳೆ ಬರೋಲ್ಲ ಎಂಬ ನಂಬಿಕೆ ರೈತಾಪಿ ಕುಲದ್ದಾಗಿದೆ. ಇಂದಿನ ಮಳೆ ಕಂಡು ಮುಂದೆ ಏನಾಗುತ್ತೋ ಎನ್ನುವ ಚಿಂತೆ ರೈತರು ಜಾರುವಂತೆ ಮಾಡಿದೆ. ಅಷ್ಟೇ ಅಲ್ಲದೆ ಈ ವರುಣನ ಅಬ್ಬರಕ್ಕೆ ಅನೇಕ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ತಗ್ಗು ಪ್ರದೇಶದ ಕೆಲವು ಮನೆಗಳಿಗೆ ನೀರು ನುಗ್ಗಿವೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವರುಣ ಅಬ್ಬರಿಸಿದ್ದಾನೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಇತ್ತ ಚಿಕ್ಕಮಗಳೂರು ಜಿಲ್ಲೆ ಕೆಲ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.