ಬೆಂಗಳೂರು: ರಾಜ್ಯದ ಹಲವೆಡೆ ವರುಣ (Rain) ಅಬ್ಬರಿಸುತ್ತಿದ್ದಾನೆ. ಇದೇನು ಬೇಸಿಗೆಯೋ ಮಳೆಗಾಲವೋ ಎಂಬ ಅನುಮಾನ ಬರುವ ರೀತಿಯಲ್ಲಿ ಭಾರೀ ಮಳೆಯಾಗುತ್ತಿದೆ.
ಹುಬ್ಬಳ್ಳಿಯಲ್ಲಿ (Hubballi) ಭಾರೀ ಮಳೆಯಾಗಿದ್ದು ರಸ್ತೆಯಲ್ಲಿ ನದಿಯೋಪಾದಿಯಲ್ಲಿ ನೀರು ಹರಿದಿದೆ. ಹಲವು ಬೈಕ್ಗಳು ನೀರಿನ ರಭಸಕ್ಕೆ ನೆಲಕ್ಕುರುಳಿದ್ದವು. ತಗ್ಗು ಪ್ರದೇಶಗಳ ಮನೆಗಳಿಗೆ ನೀರುನುಗ್ಗಿ ಜನ ಪರದಾಡಿದರು.
ಕೊಪ್ಪಳದ ಯಲಬುರ್ಗಾದಲ್ಲಿ ಸಿಡಿಲು ಬಡಿದು ಒಬ್ಬರು ಬಲಿಯಾಗಿದ್ದಾರೆ. ಜಗಳೂರಿನಲ್ಲಿ ಮರದ ರೆಂಬೆ ಕಡಿಯಲು ಹೋದ ಯುವಕನೊಬ್ಬ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾನೆ. ಕಲಬುರಗಿಯ ಆಳಂದ, ದಾವಣಗೆರೆ, ಹಾವೇರಿಯ ಶಿಗ್ಗಾಂವಿ ಸೇರಿ ಹಲವೆಡೆ ಭರ್ಜರಿ ಮಳೆಯಾಗಿದೆ. ಇದನ್ನೂ ಓದಿ: ನಿಮ್ಮ ಮತಗಟ್ಟೆ ಯಾವುದು? – ಮೊಬೈಲ್ನಲ್ಲೇ ಚೆಕ್ ಮಾಡಿ
ಬೆಂಗಳೂರಿನಲ್ಲಿ (Bengaluru) ಸೂರ್ಯ ಮತ್ತು ಮೋಡಗಳ ಕಣ್ಣಾಮುಚ್ಚಾಲೆ ಆಟ ಕಂಡುಬಂತು. ರಾಮನಗರ, ಕೋಲಾರ, ಯಾದಗಿರಿ, ತುಮಕೂರಿನ ಹಲವಡೆಯೂ ಮಳೆ ಆಗಿದೆ.
ಬೀದರ್, ರಾಯಚೂರು, ವಿಜಯಪುರ, ಬಳ್ಳಾರಿ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರಿನ ಅಲ್ಲಲ್ಲಿ ಮಳೆ ಆಗುವ ಸಂಭವ ಇದೆ.
ಬುಧವಾರ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಬಿಡುವು ಕೊಟ್ಟ ಮೇಲೆ ಹೋಗಿ ಮರೆಯದೇ ಮತದಾನ ಮಾಡಿ. ಸೋಮವಾರ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಕೆಂಬಾಳುವಿನಲ್ಲಿ 113 ಮಿಲಿಮೀಟರ್ ಮಳೆಯಾಗಿದೆ.