– ಋಷ್ಯಶೃಂಗದಲ್ಲಿ ಡಿಕೆಶಿ ಪರ್ಜನ್ಯ ಹೋಮ
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಜನರ ನಿದ್ದೆಗೆಡಿಸಿವೆ. ಬುಧವಾರ ಸಂಜೆಯಿಂದ ಬೆಂಗಳೂರಿನಲ್ಲಿ ಗುಡುಗು ಸಹಿತ ಸುರಿದ ಮಳೆ ಆರ್ಭಟ ಜೋರಾಗಿತ್ತು.
ಬಿರುಗಾಳಿ ಸಹಿತ ಬಿದ್ದ ಮಳೆಗೆ ಬೊಮ್ಮನಹಳ್ಳಿ, ಹುಳಿಮಾವು, ವಿಜಯನಗರ, ಜಯನಗರ, ರಾಜರಾಜೇಶ್ವರಿ ನಗರ, ಯಲಹಂಕ, ಚಂದ್ರಲೇಔಟ್ ಸೇರಿದಂತೆ ಹತ್ತಕ್ಕೂ ಹೆಚ್ಚು ಕಡೆ ಮರಗಳು ಧರೆಗುರುಳಿವೆ. ಅಲ್ಲದೆ ಕೆಲವು ಕಡೆ ರೆಂಬೆ ಕೊಂಬೆಗಳು ಸಹ ಮುರಿದು ರಸ್ತೆಗೆ ಬಿದ್ದಿದ್ದವು. ನಾಗರಬಾವಿ ಬಳಿ ಓಮಿನಿ ಕಾರಿನ ಮೇಲೆ ಮರ ಮತ್ತು ಕಂಬವೊಂದು ಬಿದ್ದಿದ್ದರೆ, ಚಂದ್ರಲೇಔಟ್ ನಲ್ಲಿ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದಿತ್ತು.
ಇತ್ತ ಮಳೆಗಾಗಿ ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಸರ್ಕಾರದ ವತಿಯಿಂದ ಪೂಜೆ-ಹೋಮ-ಹವನ ನಡೆಯುತ್ತಿದೆ. ಅದೇ ರೀತಿ ಮಳೆದೇವ ಎಂದೇ ಖ್ಯಾತಿಯಾಗಿರೋ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕಿಗ್ಗಾದಲ್ಲೂ ಕೂಡ ಸರ್ಕಾರದ ಪ್ರತಿನಿಧಿಯಾಗಿ ಡಿಕೆಶಿ ಹಾಗೂ ಪಿ.ಟಿ.ಪರಮೇಶ್ವರ್ ನಾಯಕ್ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಬೆಳಗ್ಗೆ 5.30ಯಿಂದಲೇ ಪೂಜೆ ಆರಂಭವಾಗಿದೆ. ಋಷ್ಯಶೃಂಗ ದೇವಾಲಯದಲ್ಲಿ ಮಳೆಗಾಗಿ ಪರ್ಜನ್ಯ ಹೋಮ, ಜಪ ನಡೆಯುತ್ತಿದ್ದು ಬಳಿಕ ಶೃಂಗೇರಿ ಶಾರದಾಂಭೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಹಿಂದೆ ಕೂಡ ಮಳೆಗಾಗಿ ಡಿಕೆಶಿ ಇಲ್ಲಿ ಬೇಡಿಕೊಂಡಿದ್ರು. ಆಗ ನಾಡಿನಲ್ಲಿ ಸಮೃದ್ಧ ಮಳೆಯಾಗಿತ್ತು.