ವಿಜಯಪುರ: ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರ ತಾಲೂಕಿನ ಮಂದ್ರೂಪ ಗ್ರಾಮದಲ್ಲಿ ಸಿಡಿಲು ತಾಗಿ ಮೂವರು ಸಾವನ್ನಪ್ಪಿದ್ದಾರೆ.
ಮೃತರನ್ನು ಪಂತುಸಿಂಗ್ ರಜಪೂತ (40), ಸಂಕೇತ್ ಚೌರಮೋಳೆ (17) ಮತ್ತು ಪಾರ್ವತಿ ಕೋರೆ (44) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ರವಿಕಾಂತ ಮೋಳೆ ಹಾಗೂ ಧರೆಪ್ಪ ಮೇತ್ರೆ ಗಾಯಗೊಂಡಿದ್ದು, ಇಬ್ಬರನ್ನು ಸೊಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ತಾಗಿದ್ದು, ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಮಂದ್ರೂಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಸಂಜೆ ವಿಜಯಪುರ ನಗರದಲ್ಲಿ ಎರಡು ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ನಗರದ ಬಹುತೇಕ ಬಡಾವಣೆಗಳಲ್ಲಿ ಹಳ್ಳದಂತೆ ನೀರು ಹರಿದಿದೆ. ನಗರದ ಜಾಡರ ಓಣಿ, ಹರಣ ಶಿಖಾರಿ ರಸ್ತೆಗಳಲ್ಲಿ ಹೆಚ್ಚು ನೀರು ಹರಿದಿದ್ದರಿಂದ ವಾಹನ ಸವಾರರು ಪರದಾಡುವಂತಾಯ್ತು. ವಿಜಯಪುರದ ಸುತ್ತಲಿನ ಪರಿಸರದಲ್ಲಿ ಮಳೆಯಾಗಿದ್ದು, ಬಿತ್ತನೆ ಮಾಡಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.