– ಸತತ ಮಳೆಗೆ ಉಕ್ಕಿ ಹರಿದ ಸ್ವರ್ಣ ನದಿ
ಉಡುಪಿ: ಜೂನ್ ತಿಂಗಳಲ್ಲಿ ಕ್ಷೀಣವಾಗಿದ್ದ ಮುಂಗಾರು ಜುಲೈನಲ್ಲಿ ಬಡ್ಡಿ ಸಮೇತ ಲೆಕ್ಕ ಚುಕ್ತಾ ಮಾಡುತ್ತಿದೆ. ಕಳೆದ ನಾಲ್ಕು ದಿನದಿಂದ ಕರಾವಳಿ ಜಿಲ್ಲೆ ಉಡುಪಿಯಲ್ಲಿ (Udupi Rain) ಭರ್ಜರಿ ಮಳೆ ಆಗುತ್ತಿದೆ. ಶಾಲಾ ಕಾಲೇಜಿಗೆ ರಜೆ ನೀಡಿದ್ದು ಜಿಲ್ಲೆಯ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಕೋಟಿ ಚೆನ್ನಯರ ಗರಡಿ ಪ್ರಾಂಗಣ ಮುಳುಗಿದೆ.
ಹವಾಮಾನ ಇಲಾಖೆಯ (Weather Department) ಮುನ್ಸೂಚನೆಯಂತೆ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ. ಪಶ್ಚಿಮ ಘಟ್ಟದ ತಪ್ಪಲು ಹೆಬ್ರಿ, ಕಾರ್ಕಳದಲ್ಲಿ (Hebri Karkala) ಸುರಿದ ಭಾರೀ ಮಳೆಯಿಂದ ಸ್ವರ್ಣ ನದಿ ವಿರಾಟ್ ರೂಪವನ್ನು ತಾಳಿದೆ. ನಗರದ ಜನರ ಜೀವನಾಡಿ ಬಜೆ ಡ್ಯಾಮ್ನಿಂದ ನೀರನ್ನು ಹೊರಗೆ ಬಿಡಲಾಗಿದೆ. ಇದನ್ನೂ ಓದಿ: ಕಾಲುವೆಗೆ ಬಿಟ್ಟಿರುವ ಕುಡಿಯುವ ನೀರಿಗೂ ಕನ್ನ – ಅಧಿಕಾರಿಗಳ ನಿರ್ಲಕ್ಷ್ಯ
ಉಡುಪಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೂಡ ನಿಡಂಬೂರು ದೈವಸ್ಥಾನ ಜಲಾವೃತವಾಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬಿದ್ದ ಭಾರಿ ಮಳೆಗೆ ಅಗಾಧ ಪ್ರಮಾಣದ ನೀರು, ನದಿಯಲ್ಲಿ ಉಡುಪಿಯತ್ತ ಹರಿಯುತ್ತಿದೆ. ಬನ್ನಂಜೆ ಸಮೀಪದ ಮೂಡ ನಿಡಂಬೂರು ಬ್ರಹ್ಮ ಬೈದರ್ಕಳ ಗರಡಿ ಪ್ರಾಂಗಣ ನೀರಿನಿಂದ ತುಂಬಿಕೊಂಡಿದೆ. ಅರ್ಚಕರು ಬೆಳಗ್ಗೆ ನೆರೆ ನೀರಲ್ಲಿ ಬಂದು ಪೂಜೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮುಂದಿನ ಎರಡು ದಿನ ಆರೆಂಜ್ ಅಲರ್ಟ್ ವಿಸ್ತರಿಸಲಾಗಿದೆ. ಮಳೆ, ನೆರೆ ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜಿಗೆ ರಜೆ ನೀಡುವ ಜವಾಬ್ದಾರಿಯನ್ನು ತಹಶೀಲ್ದಾರ್ ಮತ್ತು ಬಿಇಒ ಗೆ ಡಿಸಿ ಕೊಟ್ಟಿದ್ದಾರೆ. ಟೋಲ್ ಫ್ರೀ ನಂಬರ್ ಕೊಟ್ಟು ,ನೆರೆಪೀಡಿತ ಪ್ರದೇಶದ ಜನರು ಎಚ್ಚರಿಕೆಯಿಂದ ಇರಿ ಎಂದು ಜಿಲ್ಲಾಡಳಿತ ಸಂದೇಶ ರವಾನಿಸಿದೆ.
Web Stories