ಬೆಂಗಳೂರು: ರಾಜ್ಯದ ಬಹುತೇಕ ಕಡೆಗಳಲ್ಲಿ ಇಂದು ಸಂಜೆ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
ಸಿಲಿಕಾನ್ ಸಿಟಿಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು, ಕೆಂಗೇರಿ, ವಿಜಯನಗರ, ಆರ್ಆರ್ ನಗರ, ಶ್ರೀನಗರ ಸೇರಿ ಹಲವೆಡೆ ವರುಣನ ದರ್ಶನವಾಗಿದೆ. ಗುಡುಗು ಹಾಗೂ ಅಲಿಕಲ್ಲು ಸಹಿತ ಮಳೆಗೆ ವಾಹನ ಸವಾರರ ಪರದಾಟ ನಡೆಸುತ್ತಿದ್ದಾರೆ. ಕೆಂಗೇರಿ ಉಪನಗರದಲ್ಲಿ ಮರ ಉರುಳಿ ಇಂಡಿಕಾ ಕಾರು ಸಂಪೂರ್ಣ ಜಖಂಗೊಂಡಿದ್ದು, ಕೂದಲೆಳೆ ಅಂತರದಲ್ಲಿ ಕಾರು ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಹಾಸನ, ರಾಮನಗರ, ತುಮಕೂರು, ಬೆಳಗಾವಿ, ವಿಜಯಪುರ, ಚಿತ್ರದುರ್ಗ ಸೇರಿ ಹಲವೆಡೆ ಭಾರೀ ಮಳೆಯಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. ಹಾಸನದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಬೇಕಾಯ್ತು.
ಇನ್ನು ಬಿಸಿಲು ನಾಡು ಖ್ಯಾತಿಯ ವಿಜಯಪುರದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಅಲ್ಲಿನ ಜನರಲ್ಲಿ ಸಂತಸ ಮೂಡಿದೆ. ವಿಜಯಪುರ ನಗರದ ಸುತ್ತಮುತ್ತ ಭಾರಿ ಗಾಳಿ, ಸಿಡಿಲು ಸಮೇತ ಮಳೆಯಾಗಿದೆ.
ಬೆಳಗಾವಿ ನಗರದಲ್ಲಿ ಕೂಡ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಸತತ ಒಂದು ಗಂಟೆಯಿಂದ ಮಳೆರಾಯ ಸುರಿಯುತ್ತಿದ್ದು, ಮಳೆಯಿಂದ ವೀಕೆಂಡ್ ಆಗಿದ್ದರಿಂದ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಇಲ್ಲಿನ ಚಾವಟ್ ಗಲ್ಲಿಯ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಕಟ್ಟಡ ಕಾಮಗಾರಿ ಸ್ಥಳದಲ್ಲಿ ನಿಲ್ಲಿಸಿದ ಜೆಸಿಬಿ ಸಂಪೂರ್ಣ ಜಲಾವೃತಗೊಂಡಿದೆ. ಒಟ್ಟಿನಲ್ಲಿ ಬಿಸಿಲಿನ ಬೇಗೆಯಿಂದ ಬಳಲಿದ ಗಡಿನಾಡು ಜನರಿಗೆ ವರುಣ ತಂಪೆರೇದಿದ್ದಾನೆ. ಈ ಮೂಲಕ ಭೀಕರ ಬರಗಾಲದಿಂದ ಕಂಗೆಟ್ಟ ರೈತರಲ್ಲಿ ಸಂತಸ ಮೂಡಿದೆ.