ಬೆಂಗಳೂರು: ಗುರುವಾರ ರಾಜ್ಯಾದ್ಯಂತ ರಾತ್ರಿ ಮಳೆ ಹಲವು ಕಡೆ ನಾನಾ ಅವಾಂತರ ಸೃಷ್ಟಿಸಿದೆ. ಮಳೆಯಿಂದಾಗಿ ಒಟ್ಟು ಐವರು ಬಲಿ ಆಗಿದ್ದಾರೆ. ಸಿಡಿಲಿಗೆ ಮೂವರು, ಮನೆ ಕುಸಿದು ಒಬ್ಬರ ದುರ್ಮರಣವಾಗಿದೆ. ಹಾವೇರಿ ಹೋತನಹಳ್ಳಿಯಲ್ಲಿ ಗೋಡೆ ಕುಸಿದು ಐದು ವರ್ಷದ ಸಂದೀಪ್ ಮೆಳ್ಳಳ್ಳಿ ಎಂಬ ಬಾಲಕ ಸಾವನ್ನಪ್ಪಿದ್ದು, ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ.
ಗದಗದ ಕಿರಟಗೇರಿಯಲ್ಲಿ ಸಿಡಿಲಿಗೆ ಇಬ್ಬರು ರೈತ ಮಹಿಳೆಯರು ಸಾವನ್ನಪ್ಪಿದ್ದಾರೆ. ವಿಜಯಪುರದ ರಾಜನಾಳದಲ್ಲಿ ಸಿಡಲಿಗೆ ಸುಶೀಲವ್ವ ಎಂಬವರು ಬಲಿ ಆಗಿದ್ದಾರೆ. ವಿಜಯಪುರದ ಚಡಚಣ ತಾಲೂಕಿನ ಕರಜಗಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಶ್ರೀಶೈಲ ಪಟ್ಟಣಶೆಟ್ಟಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಭಾರೀ ಮಳೆ ಆಗಿದೆ. ನೀರಿನ ರಭಸಕ್ಕೆ ಹಳ್ಳದಲ್ಲಿ ಜಾನುವಾರು ಸಮೇತ ಕೊಚ್ಚಿ ಹೋಗುತ್ತಿದ್ದ ರೈತ ಮತ್ತು ಎತ್ತು ರಕ್ಷಣೆ ಮಾಡಲಾಗಿದೆ. ಜಮೀನಿನಿಂದ ಮನೆಗೆ ತೆರಳುವ ವೇಳೆ ಕೂಡ್ಲಿಗಿ ತಾಲೂಕಿನ ಅಮ್ಮನಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ನಗರದಲ್ಲಿನ ರಸ್ತೆಗಳು ನದಿಯಂತಾಗಿತ್ತು. ಪ್ರವಾಸಿ ಮಂದಿರದ ಮುಂಭಾಗದ ರಸ್ತೆ ಮೇಲೆ ಚರಂಡಿ ನೀರು ತುಂಬಿ ಹರಿದು ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು.
ಬೆಂಗಳೂರಿನಲ್ಲಿ ಮತ್ತೆ ರಾತ್ರಿ ಮಳೆ ಅಬ್ಬರಿಸಿದೆ. ಲಾಲ್ಬಾಗ್ ರೋಡ್, ಫ್ರೇಸರ್ ಟೌನ್, ಹೆಚ್ ಎಸ್ ಆರ್ ಲೇಔಟ್, ಶಾಂತಿನಗರ, ಸಿಲ್ಕ್ ಬೋರ್ಡ್ ಸುತ್ತ ಭರ್ಜರಿ ಮಳೆ ಆಗಿದೆ. ಮುಂದಿನ ಮೂರು ದಿನ ಮತ್ತೆ ಮಳೆ ಆಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಲಾಗಿದೆ.
ವಿಜಯಪುರದಲ್ಲಿ ಭಾರೀ ಮಳೆ ಆಗಿದೆ. ಗುಡುಗು ಸಿಡಿಲು ಸಮೇತ ಸುರಿದ ಭಾರೀ ಮಳೆ ಜನರು ತತ್ತರಿಸಿದ್ದಾರೆ. ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತು ವಾಹನ ಸವಾರರು ಪರದಾಡಿದ್ರೆ, ನಗರದ ಮದ್ದಿನಗಣಿ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಮಹಿಳೆಯರು ಹರಸಾಹಸ ಪಡಬೇಕಾಯ್ತು. ಜೊತೆಗೆ ವಿದ್ಯುತ್ ವ್ಯತ್ಯಯ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು.