ಚಿಕ್ಕಬಳ್ಳಾಪುರ: ತಡರಾತ್ರಿ ಜಿಲ್ಲೆಯಾದ್ಯಾಂತ ಧಾರಕಾರ ಮಳೆಯಾಗಿದ್ದು (Heavy Rain), ಹಲವೆಡೆ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಜಿಲ್ಲೆಯ ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು ಭಾಗದಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ. ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ಅಪಾಯದ ಮಟ್ಟ ಮೀರಿ ಕೋಡಿ ಹರಿಯುತ್ತಿದೆ. ಇದನ್ನೂ ಓದಿ: ಮುರುಘಾ ಶ್ರೀಗೆ ಮತ್ತೆ ಸಂಕಷ್ಟ – ಮೈಸೂರಿನಲ್ಲಿ ಮತ್ತೊಂದು FIR ದಾಖಲು
ಎಲ್ಲೆಲ್ಲಿ ಸಂಚಾರ ಬಂದ್?
ಗುಡಿಬಂಡೆ-ಪೇರೇಸಂದ್ರ ಮಾರ್ಗ, ಗುಡಿಬಂಡೆ ಹಂಪಸಂದ್ರ-ಬಾಗೇಪಲ್ಲಿ ಮಾರ್ಗ, ಗುಡಿಬಂಡೆ-ಲಕ್ಕೇನಹಳ್ಳಿ ಮಾರ್ಗ, ರಾಮಪಟ್ಟಣ ನವಿಲುಗುರ್ಕಿ ಮಾರ್ಗ, ಗುಡಿಬಂಡೆ ಅಮಾನಿ ಭೈರಸಾಗರ ಮಾರ್ಗಗಳಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ಜಲದಿಗ್ಬಂಧನವಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿರುವ ಮಾರ್ಗಗಳಲ್ಲೂ ಸಂಚಾರ ಕಷ್ಟಕರವಾಗಿದೆ. ಇದನ್ನೂ ಓದಿ: ಪ್ರಹ್ಲಾದ್ ಜೋಶಿ ಕಾರ್ಯವೈಖರಿ ಹೊಗಳಿದ ಕಾಂಗ್ರೆಸ್ ನಾಯಕ, ರಾಜಸ್ಥಾನ ಸಿಎಂ ಗೆಹ್ಲೋಟ್
ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾಕೇಂದ್ರಕ್ಕೆ ಬರಲು ಗೌರಿಬಿದನೂರು ಮಾರ್ಗ ಬಳಸಬೇಕಿದೆ. ಬಾಗೇಪಲ್ಲಿಯಲ್ಲೂ ಭರ್ಜರಿ ಮಳೆಯಾಗಿರುವುದರಿಂದ ಪಟ್ಟಣದ ಟಿಬಿ ಕ್ರಾಸ್ ಬಳಿ ಅಂಡರ್ ಪಾಸ್ ಜಲಾವೃತವಾಗಿ ವಾಹನ (Vehicle) ಸವಾರರು ಪರದಾಡುತ್ತಿದ್ದಾರೆ. ಇದರಿಂದ ಬಾಗೇಪಲ್ಲಿಗೆ ತೆರಳಲು ಎಲ್ಲೋಡು ಮಾರ್ಗ ಕಲ್ಪಿಸಲಾಗಿದೆ. ಕಾರೊಂದು ಜಲಾವೃತವಾಗಿ ಅಂಡರ್ ಪಾಸ್ನಲ್ಲೇ ಕೆಟ್ಟುನಿಂತಿದೆ. ಬಾಗೇಪಲ್ಲಿ-ಪುಟ್ಟಪರ್ತಿ ಮಾರ್ಗದಲ್ಲಿ ಕುಶಾವತಿ ಮೈದುಂಬಿ ಹರಿಯುತ್ತಿದ್ದು, ಪುಟ್ಟಪರ್ತಿ ಮಾರ್ಗದ ಸಂಚಾರ ಬಂದ್ ಆಗಿದೆ. ಗುಡಿಬಂಡೆ ತಾಲ್ಲೂಕು ನಿಲಗುಂಬ ಗ್ರಾಮ ಸೇರಿ ಹಲವೆಡೆ ಮನೆಗಳು ಕುಸಿದಿರುವ ಮಾಹಿತಿಯಿದೆ.