ಬೆಂಗಳೂರು: ನಗರದಲ್ಲಿ ಸಂಜೆ ವೇಳೆಗೆ ದಿಢೀರ್ ಎಂದು ಭಾರೀ ಮಳೆಯಾಗಿದ್ದು, ನಗರದ ಹೃದಯಭಾಗವಾದ ಮೆಜೆಸ್ಟಿಕ್ ಸೇರಿದಂತೆ ಮೈಸೂರು ಸರ್ಕಲ್, ಸಂಜಯ್ ನಗರ, ಯಶವಂತಪುರ, ಕೋರಮಂಗಲ, ಹೆಬ್ಬಾಳ, ಚಾಮರಾಜನಗರ ಭಾಗಗಳಲ್ಲಿ ಮಳೆಯಾಗಿದೆ.
ಭಾರೀ ಮಳೆಗೆ ಮಲ್ಲೇಶ್ವರಂ 18ನೇ ಕ್ರಾಸ್ನ ಬಳಿ ಇರುವ ಚರಂಡಿ ಒಡೆದು ಹೋಗಿದ್ದು, ಅಪಾರ ಪ್ರಮಾಣದ ನೀರು ರಸ್ತೆಯಲ್ಲಿ ತುಂಬಿತ್ತು. ಇತ್ತ ಬಿಟಿಎಂ ಲೇಔಟ್ ರಸ್ತೆ ಜಲಾವೃತವಾಗಿತ್ತು. ಮಲ್ಲೇಶ್ವರಂ, ವಿದ್ಯಾರಣ್ಯಪುರ, ಯಲಹಂಕ ಬಿಟಿಎಂ ಲೇಔಟ್ ಸೇರಿದಂತೆ ಹಲವೆಡೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಕಚೇರಿಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳಲುತ್ತಿದ್ದ ಜನರು ಮಳೆಯಿಂದ ಸಮಸ್ಯೆ ಎದುರಿಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಜನರನ್ನು ಪರದಾಡುವಂತೆ ಮಾಡಿತ್ತು. ಹವಾಮಾನ ಇಲಾಖೆ ಸೂಚನೆಯಂತೆ ನಾಳೆಯೂ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ.