ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸುತ್ತಮುತ್ತ ಜೋರಾಗಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಬೆಂಗಳೂರು- ನೆಲಮಂಗಲ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ.
ಬೆಂಗಳೂರಿನಲ್ಲಿ ಮಳೆ ಶುರುವಾಗಿದ್ದು, ಯಶವಂತಪುರ, ಮಲ್ಲೇಶ್ವರಂ, ಗೊರಗುಂಟೆಪಾಳ್ಯ ಪಾಳ್ಯ ಸುತ್ತಮುತ್ತ ಜೋರಾಗಿ ಮಳೆಯಾಗಿದೆ. ಮಾರ್ಚ್ 24ನೇ ತಾರೀಖಿನವರೆಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗುಡುಗು ಸಹಿತ ಮಳೆಯಾಗಲಿದೆ. ಬಂಗಾಳಕೊಲ್ಲಿಯ ಜೊತೆಗೆ ಉತ್ತರ ಒಳನಾಡಿನಲ್ಲೂ ಹವಾಮಾನ ವೈಪರಿತ್ಯವಾದ ಹಿನ್ನೆಲೆಯಲ್ಲಿ ಮೂರು ದಿನ ಮಳೆಯಾಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಭಿಕ್ಷುಕನ ಜೊತೆ ಪತ್ನಿ ರೋಮ್ಯಾನ್ಸ್ ನೋಡಿ ಬೆಚ್ಚಿಬಿದ್ದ ಪತಿ
ಮಳೆ ಜೋರಾದ ಕಾರಣ ಬೆಂಗಳೂರು- ತುಮಕೂರು ಹೆದ್ದಾರಿಯಲ್ಲಿ 2 ಸರಣಿ ಅಪಘಾತ ಸಂಭವಿಸಿದೆ. ಪೀಣ್ಯ ಫ್ಲೈ ಓವರ್ ಮತ್ತು ನೆಲಮಂಗಲ ಟೋಲ್ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ 8 ಕಾರು 1 ಆಟೋ ಜಖಂ ಗೊಂಡಿವೆ. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಾಗಿದ್ದು, ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೀಣ್ಯ ಫ್ಲೈಓವರ್ ಮೇಲೆ ನೀರು ನಿಂತುಕೊಂಡಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಾರ್ಲೆಜೀ ಬಳಿಯ ನವಯುಗ ಟೋಲ್ ಬಳಿ ನಾಲ್ಕು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ವೇಗವಾಗಿ ಚಲಿಸುವ ವೇಳೆ ಒಂದಕ್ಕೊಂದು ಹಿಂದೆಯಿಂದ ಡಿಕ್ಕಿಯಾಗಿವೆ. ಈ ವೇಳೆ ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.