ಕಾರವಾರ/ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಾದ್ಯಂತ ವರುಣನ ಅಬ್ಬರ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ಕ್ಷೀಣಿಸಿದ್ದ ಮಳೆ ಇಂದು ಹೆಚ್ಚಾಗಿದೆ.
ಕಳೆದ 24 ಗಂಟೆಗಳಲ್ಲಿ ಕಾರವಾರದಲ್ಲಿ 32.6 ಮಿಮೀ ಮಳೆ ಸುರಿದಿದೆ. ಮಳೆಯಿಂದಾಗಿ ಕಾರವಾರ ಭಾಗದ ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ನೀರು ನಿಂತಿದ್ದು ವಾಹನ ಸವಾರರು, ಪಾದಚಾರಿಗಳು ತೊಂದರೆ ಪಡುವಂತಾಯಿತು. ಇನ್ನೂ ಎರಡು ದಿನ ಕರಾವಳಿ ಭಾಗದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇತ್ತ ಬೆಂಗಳೂರಿನಲ್ಲಿ ಗುರುವಾರ ಸುರಿದ ಭಾರೀ ಮಳೆಗೆ ದೇವನಹಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿ ನೀರು ತೊಟ್ಟಿಕ್ಕುತ್ತಿತ್ತು. ಲೈಟ್ಗಳು ಅಳವಡಿಸಿದ್ದ ಜಾಗದಲ್ಲಿ ಮಳೆ ನೀರು ನಿರಂತರವಾಗಿ ಸೋರುತ್ತಿತ್ತು. ನೀರನ್ನು ಹೊರಗೆ ಹಾಕಲು ವಿಮಾನ ನಿಲ್ದಾಣದ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದರು.
ಅಲ್ಲದೆ ನಾಗವಾರ ಸುತ್ತಮುತ್ತ ಹಾಗೂ ನೆಲಮಂಗಲ ಸುತ್ತಮುತ್ತ ಭಾರೀ ಮಳೆ ಆಗಿದೆ. ರಾಜಕಾಲುವೆಗಳು ತುಂಬಿದ್ದು ರಸ್ತೆಯಲ್ಲೆಲ್ಲ ನೀರು ನಿಂತು ವಾಹನ ಸವಾರರು ಪರದಾಡುವಂತೆ ಆಯಿತು.