ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಪ್ರತಿದಿನವೂ ಮಳೆಯಾಗುತ್ತಿದೆ. ಭಾನುವಾರ ಸಂಜೆಯೂ ನೆಲಮಂಗಲ ಪಟ್ಟಣದಲ್ಲಿ ಬಿರುಗಾಳಿ ಸಹಿತ ಜೋರಾಗಿ ಮಳೆಯಾಗಿದೆ.
ಬಿರುಗಾಳಿ ಸಹಿತ ಭಾರೀ ಮಳೆ ಹಿನ್ನೆಲೆಯಲ್ಲಿ ನೆಲಮಂಗಲ ಸಮೀಪದ ಬೆತ್ತನಗೆರೆ ಗ್ರಾಮದಲ್ಲಿ ಮನೆಯ ಮೇಲೆ ಬೃಹತ್ ಮರ ಬಿದ್ದು ಮನೆ ಜಖಂ ಆಗಿದೆ. ರೈತ ಮುನಿರಾಜು ಎಂಬವರಿಗೆ ಸೇರಿದ ಮನೆಯಾಗಿದ್ದು, ಸದ್ಯಕ್ಕೆ ಈ ಅವಘಡದಿಂದ ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಹಾನಿಗೊಳಗಾಗಿವೆ. ಅಷ್ಟೇ ಅಲ್ಲದೆ ಈ ಮಳೆಯಿಂದ ನಗರದಲ್ಲಿ ಐದು ವಿದ್ಯುತ್ ಕಂಬಗಳು ಧರೆಗುರುಳಿವೆ. ಧಾರಾಕಾರ ಮಳೆಗೆ ರಸ್ತೆಯಲ್ಲಿ ನೀರು ತುಂಬಿದ್ದು, ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು.
ಎರಡು ದಿನಗಳ ಹಿಂದೆಯೂ ನಗರದ ನಾಗವಾರ, ಹೆಬ್ಬಾಳ, ಹೆಣ್ಣೂರು, ಥಣಿಸಂದ್ರ, ಮಾನ್ಯತಾ ಟೆಕ್ ಪಾರ್ಕ್, ವಿದ್ಯಾಸಾಗರ, ಕೆಜಿ ಹಳ್ಳಿ, ಕಮ್ಮನಹಳ್ಳಿ, ಯಲಹಂಕ, ಜಕ್ಕೂರು ಭಾಗದಲ್ಲಿ ಮಳೆ ಅಬ್ಬರಿಸಿತ್ತು. ಮಳೆಗೆ ಜಯನಗರ, ನಿಮ್ಹಾನ್ಸ್ ಹಾಗೂ ನಾಗವಾರದಲ್ಲಿ ಮರಗಳು ಧರೆಗೆ ಉರುಳಿದ್ದು, ಜಯನಗರದಲ್ಲಿ ಕಾರಿನ ಮೇಲೆ ಬೃಹತ್ ಮರ ಬಿದ್ದಿತ್ತು.