ಬೆಂಗಳೂರು: ಒಂದು ಕಡೆ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಮಳೆಯ ಸಿಡಿಲಿನ ಅಬ್ಬರಕ್ಕೆ ಗೃಹಪಯೋಗಿವಸ್ತುಗಳು ಹಾನಿಯಾಗಿವೆ.
ನೆಲಮಂಗಲ ನಗರದ ವಿನಾಯಕ ನಗರ ಹಾಗೂ ಹೊನ್ನಗಂಗಯ್ಯನ ಪಾಳ್ಯದಲ್ಲಿ ಗುರುವಾರ ರಾತ್ರಿ ಮಳೆಯ ಜೊತೆ ಸಿಡಿಲ ಅಬ್ಬರಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಗೃಹಪಯೋಗಿವಸ್ತುಗಳು ನಾಶವಾಗಿದೆ. ಹೊನ್ನಗಂಗಯ್ಯನಪಾಳ್ಯದಲ್ಲಿ 15 ಟಿವಿ, 5 ಫ್ರಿಡ್ಜ್, ಮನೆಯಲ್ಲಿನ ವೈರಿಂಗ್, ಸ್ವಿಚ್ ಬೋರ್ಡ್ ಗಳು, 3 ಯುಪಿಎಸ್, ಎಸಿಗಳಿಗೆ ಹಾನಿಯಾಗಿದೆ.
ಸಿಡಿಲು ಬಡಿತಕ್ಕೆ ಕಂಗಾಲಾದ ಮನೆಯ ಮಾಲೀಕರು ಹೊಸದಾಗಿ ವೈರಿಂಗ್ ಮಾಡುವ ಅನಿವಾರ್ಯತೆ ಎದುರಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ನೆಲಮಂಗಲ ಬೆಸ್ಕಾಂ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ರಾತ್ರಿ ಮಳೆ ಗಾಳಿಯ ರಭಸಕ್ಕೆ ಬಸ್ ಮೇಲೆ ಕಬ್ಬಿಣದ ಕಂಬಿಗಳು ವಾಲಿ ಬಿದ್ದ ಘಟನೆ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಲ್ಲಿ ನಡೆದಿತ್ತು. ಕೊರೊನಾ ವೈರಸ್ನಿಂದಾಗಿ ದೇಶಾದ್ಯಂತ ಲಾಕ್ಡೌನ್ ಘೋಷಿದ್ದರಿಂದ ಮೆಟ್ರೋ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಆದರೆ ರಾತ್ರಿ ಜೋರಾಗಿ ಬಂದ ಗಾಳಿ ಮಳೆಯಿಂದ ಮೆಟ್ರೋ ಪಿಲ್ಲರ್ಗೆ ಅಳವಡಿಸಲು ನಿಲ್ಲಿಸಲಾಗಿದ್ದ ಕಬ್ಬಿಣದ ಕಂಬಿಗಳು ಹಾರೋಹಳ್ಳಿಯಿಂದ ಬೆಂಗಳೂರಿನತ್ತ ಬರುತ್ತಿದ್ದ ಖಾಸಗಿ ಕಂಪನಿಯ ಬಸ್ ಮೇಲೆ ಬಿದ್ದಿತ್ತು.
ಅದೃಷ್ಟವಶಾತ್ ಬಸ್ ಮುಂಭಾಗದಲ್ಲಿ ಕಂಬಿಗಳು ಬಿದ್ದಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಬಸ್ನಲ್ಲಿದ್ದ 25 ಜನರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಹುಳಿಮಾವು ಪೊಲೀಸರು ಸ್ಥಳಕ್ಕಾಗಮಿಸಿ ರಸ್ತೆ ತೆರವುಗೊಳಿಸಿದ್ದರು.