ಬೆಂಗಳೂರು: ನಗರದಲ್ಲಿ ರಾತ್ರೀ ಸುರಿದ ರಣಭೀಕರ ಮಳೆಗೆ ಸಿಲಿಕಾನ್ಸಿಟಿ ನಲುಗಿ ಹೋಗಿದೆ. ಭಾರೀ ಮಳೆಗೆ ನಗರದಲ್ಲಿ ಐವರು ಬಲಿಯಾಗಿದ್ದು, ರಾಜರಾಜೇಶ್ವರಿ ನಗರದಲ್ಲಿ ಜಾನುವಾರುಗಳು ಕೂಡ ಬಲಿಯಾಗಿವೆ.
ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರ ಪಾಡು ಅಂತೂ ಹೇಳತೀರದು. ವೈಯಾಲಿಕಾವಲ್ 18ನೇ ಕ್ರಾಸ್ನಲ್ಲಿ ಮನೆ ಕುಸಿತವಾಗಿದೆ. ಪರಿಣಾಮ ಮನೆಯಲ್ಲಿದ್ದ ತಸಿಂಭಾನು ಎಂಬ ಮಹಿಳೆಗೆ ಗಂಭೀರಗಾಯವಾಗಿದೆ.
ತಕ್ಷಣವೇ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ಮಧ್ಯೆ ವೈಯಾಲಿಕಾವಲ್ನ ಪೊಲೀಸ್ ಠಾಣೆ ಪಕ್ಕದಲ್ಲೇ ಭೂಮಿ ಬಾಯ್ಬಿಟ್ಟಿದೆ. ರಾಜಕಾಲುವೆ ಪಕ್ಕದಲ್ಲೇ ಈ ಕುಸಿತವಾಗಿದ್ದು, ಸುಮಾರು 6 ಅಡಿಯಷ್ಟು ಉದ್ದ ಮತ್ತು 5 ಅಡಿಯಷ್ಟು ಅಗಲ ಭೂಮಿ ಬಾಯ್ಬಿಟ್ಟಿದೆ. ಘಟನೆ ನಡೆಯುತ್ತಿದ್ದಂತೆ ಜನ ಭಯಭೀತರಾಗಿದ್ದು, ಮನೆಯಿಂದ ಹೊರಗಡೆ ಓಡಿಬಂದಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಧಾರಾಕಾರ ಮಳೆಯಾಗಿದೆ.. ಎಂ.ಜಿ ರಸ್ತೆ ಬಡಾವಣೆ ಸಂಪೂರ್ಣ ಜಲಾವೃತವಾಗಿದ್ದು ರಸ್ತೆಯಲ್ಲಿ ಚಲಿಸಲು ವಾಹನ ಸವಾರರು ಪರದಾಡಿದ್ರು. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು ಪಟ್ಣಣದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.
ಇನ್ನು ಭಾರೀ ಮಳೆಗೆ ನಗರದಲ್ಲಿ ಜನರು ಮಾತ್ರವಲ್ಲದೇ ಜಾನುವಾರುಗಳು ಕೂಡ ಬಲಿಯಾಗಿವೆ. ರಾಜರಾಜೇಶ್ವರಿ ನಗರದಲ್ಲಿರುವ ಫಾರ್ಮ್ಹೌಸ್ವೊಂದಕ್ಕೆ ನೀರು ನುಗ್ಗಿ ಒಳಗೆ ಕಟ್ಟಿಹಾಕಿದ್ದ 15 ಹಸುಗಳು, 6 ಎಮ್ಮೆಗಳು ಮೃತಪಟ್ಟಿವೆ. ಒಟ್ಟು 30 ಜಾನುವಾರುಗಳನ್ನು ಕಟ್ಟಿ ಹಾಕಲಾಗಿತ್ತು. ಅದರಲ್ಲಿ 9 ಜಾನುವಾರುಗಳನ್ನು ರಕ್ಷಿಸಲಾಗಿದೆ. ಪಾರ್ಮ್ಹೌಸ್ ಒಳಗೆ ಮಳೆ ನೀರು ನುಗ್ಗಿದ್ದರಿಂದ ಜಾನುವಾರುಗಳು ಮುಳುಗಿ ಮೃತಪಟ್ಟಿವೆ ಎಂಬುವುದಾಗಿ ತಿಳಿದುಬಂದಿದೆ.