ರಾಯಚೂರು: ನಗರದಲ್ಲಿ ಭಾನುವಾರ ಭಾರೀ ಮಳೆಯಾದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವ್ಯಕ್ತಿಯೊಬ್ಬರು ಒಳಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಕೊಪ್ಪಳ ಮೂಲದ ಶಿಕ್ಷಕ ಭೀಮಪ್ಪ ಸಾವನ್ನಪ್ಪಿದ ವ್ಯಕ್ತಿ. ನಗರದ ತೀನ್ ಕಂದೀಲ್ ಬಳಿ ಈ ಘಟನೆ ನಡೆದಿದೆ. ಭೀಮಪ್ಪ ರಾತ್ರಿಯೇ ಚರಂಡಿಗೆ ಬಿದ್ದಿದ್ದು ಮಳೆ ಹಿನ್ನೆಲೆಯಲ್ಲಿ ಸಾವನ್ನಪ್ಪಿರಬಹುದು ಅಂತ ಶಂಕಿಸಲಾಗಿದೆ.
ರಾಯಚೂರಿನ ರೈಲ್ವೇ ಕೆಳಸೇತುವೆಗೆ ನೀರು ನುಗ್ಗಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಶಾಲೆಗೆ ತೆರಳಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾ ಕೂಡ ಕೆಳಸೇತುವೆ ಮಾರ್ಗದಲ್ಲಿ ಸಂಚರಿಸುತ್ತಿಲ್ಲ. ಹೀಗಾಗಿ ಮಕ್ಕಳು ಶಾಲೆಗೆ ಹೋಗುವ ಬದಲು ಮನೆಗೆ ಮರಳುವಂತಾಗಿದೆ.
ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಪೂರ್ಣ ನೀರು ನಿಂತಿದ್ದು ಕೆರೆಯಂತಾಗಿದೆ. ನೀರು ಹೋಗಲು ದಾರಿಯಿಲ್ಲದೆ ಕ್ರೀಡಾಂಗಣಕ್ಕೆ ಕ್ರೀಡಾಪಟುಗಳು ಕಾಲಿಡದಂತಾಗಿದೆ. ಜಿಲ್ಲೆಯ ವಿವಿಧೆಡೆ ಸುರಿದ ಮಳೆಗೆ ರಸ್ತೆ ಸಂಚಾರ ಹದಗೆಟ್ಟಿದ್ದು ಜನ ಪರದಾಡುತ್ತಿದ್ದಾರೆ. ಮಾನ್ವಿ ತಾಲೂಕಿನ ಕುರಕುಂದ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಿರವಾರ-ಹಟ್ಟಿ ರಸ್ತೆ ಮಾರ್ಗ ಬಂದ್ ಆಗಿದೆ.