ಮುಂಬೈನಲ್ಲಿ ನಿಲ್ಲದ ವರುಣನ ರೌದ್ರಾವತಾರ – ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ

Public TV
1 Min Read
806936 rain1

-ಅಸ್ಸಾಂ, ಬಿಹಾರದಲ್ಲೂ ಮರಣ ಮಳೆ

ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಅಬ್ಬರ ಜೋರಾಗಿದ್ದು, ಮಹಾನಗರಿ ಮುಂಬೈ ಮುಳುಗಡೆಯಾಗಿದೆ. ರಸ್ತೆಗಳು ಜಲಾವೃತವಾಗಿದ್ದು, ಕಾರು ಬೈಕ್‍ಗಳು ಆಟಿಕೆಯಂತಾಗಿವೆ. ರೈಲು, ವಿಮಾನ ನಿಲ್ದಾಣಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಮುಂಬೈನಿಂದ ಕೊಲ್ಹಾಪುರಕ್ಕೆ ಹೊರಟಿದ್ದ ಮಹಾಲಕ್ಷ್ಮೀ ಎಕ್ಸ್ ಪ್ರೆಸ್ ರೈಲು ಶುಕ್ರವಾರ ರಾತ್ರಿಯಿಂದ ಠಾಣೆಯ ಬದಲಾಪುರದ ಬಳಿ ಪ್ರವಾಹದ ನೀರಿನಲ್ಲಿ ಸಿಲುಕಿತ್ತು. ತಮ್ಮನ್ನು ಹೇಗಾದರೂ ಮಾಡಿ ಕಾಪಾಡಿ, ಹಲವು ಗಂಟೆಗಳಿಂದ ರೈಲಿನಲ್ಲಿಯೇ ಬಂಧಿಯಾಗಿದ್ದೇವೆ ಎಂದು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಎನ್‌ಡಿಆರ್‌ಎಫ್‌, ವಾಯುಪಡೆ ಮತ್ತು ನೌಕಾಪಡೆಗಳ ಯೋಧರು ಕಾರ್ಯಾಚರಣೆ ನಡೆಸಿದ್ದರು. ಹೆಲಿಕಾಪ್ಟರ್ ಮತ್ತು ಬೋಟ್‍ಗಳ ನೆರವಿನಿಂದ 9 ಗರ್ಭಿಣಿಯರು, ಮಹಿಳೆಯರು ಮಕ್ಕಳು ಸೇರಿ ರೈಲಿನಲ್ಲಿದ್ದ ಎಲ್ಲ 1050 ಪ್ರಯಣಿಕರನ್ನು ರಕ್ಷಿಸಿದ್ದಾರೆ.

ಮುಂಬೈ ಏರ್‌ಪೋರ್ಟ್‌ನಲ್ಲೂ 11 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಕೆಲವು ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಎನ್‌ಡಿಆರ್‌ಎಫ್‌ ಪಡೆ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಾಗಿದೆ.

ಇತ್ತ ಅಸ್ಸಾಂನಲ್ಲಿ ಪ್ರವಾಹ ಮುಂದುವರಿದಿದ್ದು, ಸಾವಿನ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ರಾಜಸ್ಥಾನದ ಸಿಕಾರ್‍ನಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದ್ದು, ಬೈಕ್ ಸವಾರನೊಬ್ಬ ಕೊಚ್ಚಿ ಹೋಗಿದ್ದಾನೆ. ಮೂವರು ಬಾಲಕಿಯರನ್ನು ರಕ್ಷಿಸಲಾಗಿದೆ. ಒಡಿಶಾ, ಮಧ್ಯಪ್ರದೇಶ, ಛತ್ತೀಸ್‍ಗಢ, ವಿದರ್ಭಾ, ಗುಜರಾತ್‍ನಲ್ಲೂ ಇನ್ನೂ ಮೂರು ದಿನ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಬಾಂಗ್ಲಾ, ನೇಪಾಳ, ಮ್ಯಾನ್ಮಾರ್‌ನಲ್ಲೂ  ಮಳೆಯ ಅಬ್ಬರ ಜೋರಾಗಿದೆ. ಈ ಬಾರಿ ಸುರಿದ ಮಳೆಗೆ ಭಾರತ ಸೇರಿ ನಾಲ್ಕು ದೇಶಗಳಲ್ಲಿ ಪ್ರವಾಹಕ್ಕೆ 600 ಮಂದಿ ಬಲಿಯಾಗಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *