ಮಂಗಳೂರು: ಮೆಕುನು ಚಂಡಮಾರುತ ಪರಿಣಾಮದಿಂದಾಗಿ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಮಂಗಳೂರಿನಲ್ಲಿ ನೆರೆಯ ಭೀತಿ ಆವರಿಸಿದೆ.
ಮಂಗಳೂರು ನಗರದ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ರಸ್ತೆಯಿಡೀ ನೀರಿನಿಂದ ಆವೃತವಾಗಿದೆ. ತಗ್ಗು ಪ್ರದೇಶದ ಅಂಗಡಿ, ವ್ಯಾಪಾರ ಕೇಂದ್ರಗಳಿಗೆ ನೀರು ನುಗ್ಗಿದೆ. ಹಲವು ಮನೆಗಳಿಗೂ ನೀರು ನುಗ್ಗಿದ್ದು, ಜನ ಆರಂಭಿಕ ಮಳೆಯಲ್ಲೇ ಪರದಾಟ ಆರಂಭಿಸಿದ್ದಾರೆ.
ಕೊಟ್ಟಾರ, ಅತ್ತಾವರದಲ್ಲಿ ನೆರೆ ನೀರು ಆವರಿಸಿ ಜನರು ಆತಂಕ ಎದುರಿಸುತ್ತಿದ್ದಾರೆ. ಇದರಿಂದಾಗಿ ನಗರದಾದ್ಯಂತ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಮಳೆ ಒಂದೇ ಸಮನೆ ಸುರಿಯುತ್ತಿದ್ದು, ಮಳೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮುಂಜಾಗ್ರತೆ ವಹಿಸದ ಕಾರಣ ಜನ ಕಷ್ಟ ಎದುರಿಸುವಂತಾಗಿದೆ.
ಇನ್ನು ದೇಶಕ್ಕೆ ನೈರುತ್ಯ ಮುಂಗಾರು ಮಳೆ ಆಗಮನವಾಗಿದ್ದು, ಇನ್ನು 3 ದಿನ ಮೊದಲೇ ಕೇರಳದ ಭಾಗಕ್ಕೆ ಮುಂಗಾರು ಮಳೆ ಎಂಟ್ರಿ ಕೊಟ್ಟಿದೆ. ಆದ್ದರಿಂದ ಇನ್ನೂ ಎರಡು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಆಗಮನವಾಗುವ ಸಾಧ್ಯತೆ ಇದೆ.
ಕೇರಳ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮುಂಗಾರು ಇನ್ನಷ್ಟು ಚುರುಕುಗೊಂಡಿದ್ದು, ಮುಂದಿನ ಎರಡು ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಭಾರೀ ಮಳೆಯಾಗುವ ಸಂಭವಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ವಿಜ್ಞಾನಿ ಗವಾಸ್ಕರ್ ಮಾಹಿತಿ ತಿಳಿಸಿದ್ದಾರೆ.