ಲಕ್ನೋ: ಪ್ರಿಯತಮೆಗೆ ಬೇರೊಬ್ಬನ ಜೊತೆ ನಿಶ್ಚಯವಾಗಿದ್ದರಿಂದ ಆಘಾತಗೊಂಡ 22 ವರ್ಷದ ಯುವಕನೊಬ್ಬ ಫೇಸ್ಬುಕ್ ಲೈವ್ ಬಂದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಶ್ಯಾಮ್ ಸಿಕಾರ್ವರ್ ಅಲಿಯಾಸ್ ರಾಜ್ ಆಗ್ರಾ ಜಿಲ್ಲೆಯ ರೇಭಾ ಗ್ರಾಮದ ದೇವಸ್ಥಾನದ ಪಕ್ಕವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ರಾಜ್ ಫೇಸ್ ಬುಕ್ ಲೈವ್ ಗೆ ಬಂದು ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ಗೆಳೆಯರ ಬಳಿ ಹೇಳಿಕೊಂಡಿದ್ದಾನೆ. ಆತನ ಗೆಳೆಯರು ಕೂಡ ರಾಜ್ ಫೇಸ್ ಬುಕ್ ಲೈವ್ ನೋಡಿದ್ದಾರೆ.
ಆತ್ಮಹತ್ಯೆಗೂ ಮುನ್ನ 4 ನಿಮಿಷದ ವಿಡಿಯೋದಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಪೊಲೀಸರಲ್ಲಿ ಮನವಿ ಕೂಡ ಮಾಡಿಕೊಂಡಿದ್ದಾನೆ. ಇಷ್ಟು ಮಾತ್ರವಲ್ಲದೆ ನನ್ನ ಮೃತದೇಹದ ಫೋಟೋವನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡುವಂತೆ ರಾಜ್ ತನ್ನ ಕುಟುಂಬಸ್ಥರಿಗೆ ತಿಳಿಸಿದ್ದಾನೆ.
ಬರೀ ವಿಡಿಯೋ ಅಲ್ಲದೆ ರಾಜ್ 4 ಪುಟಗಳ ಡೆತ್ ನೋಟ್ ಬರೆದಿದ್ದಾನೆ. ಪತ್ರದಲ್ಲಿ ಕುಟುಂಬದ ಸದಸ್ಯರಲ್ಲಿ ತನ್ನ ಅಂಗಾಂಗಳನ್ನು ದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ.
ನಾನು ಅವಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವಳಿಲ್ಲದೆ ನನಗೆ ಬದುಕಿರಲು ಸಾಧ್ಯವಿಲ್ಲ. ಅವಳಿಗೆ ಬೇರೊಬ್ಬನ ಜೊತೆ ಮದುವೆಯಾಗುತ್ತದೆ ಎಂದು ಊಹಿಸಲೂ ನನ್ನಿಂದ ಸಾಧ್ಯವಾಗುತ್ತಿಲ್ಲ. ಇದರಿಂದ ನಾನು ಸಾಕಷ್ಟು ನೊಂದಿದ್ದೇನೆ. ಆಕೆಗೆ ಬೇರೆಯವನ ಜೊತೆ ನಿಶ್ಚಯವಾದ ಬಳಿಕ ನಾನು ಮಾನಸಿಕವಾಗಿ ಕುಗ್ಗಿದ್ದೇನೆ. ಹೀಗಾಗಿ ನಾನು ನನ್ನ ಉದ್ಯೋಗವನ್ನೂ ಕಳೆದುಕೊಂಡಿದ್ದೇನೆ ಎಂದು ರಾಜ್ ತನ್ನ ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದಾನೆ.
ರಾಜ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಈಗ ನಿರುದ್ಯೋಗಿಯಾಗಿದ್ದ.