ಬೆಂಗಳೂರು: ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದ ಯುವಕನ ಹೃದಯವನ್ನು ಪೋಷಕರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಯುವಕನ ಹೃದಯವನ್ನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ನಾರಾಯಣ ಹೃದಯಾಲಯ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಕಸಿ ಮಾಡಿದ್ದಾರೆ.
ರಸ್ತೆ ಅಪಘಾತದಲ್ಲಿ 23 ವರ್ಷದ ಯುವಕ ಪುರುಷೋತ್ತಮ್ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ, ಆತನ ಹೃದಯವನ್ನು ಬೆಂಗಳೂರಿನ ಜೆಪಿ ನಗರದ ಆಸ್ಟರ್ ಆಸ್ಪತ್ರೆಯಿಂದ ನಾರಾಯಣ ಹೃದಯಾಲಕ್ಕೆ ಅಂಬ್ಯುಲೆನ್ಸ್ ಮೂಲಕ ಯಶಸ್ವಿಯಾಗಿ ರವಾನೆ ಮಾಡಲಾಗಿದೆ.
ಕಳೆದ ಮೂರು ತಿಂಗಳಿನಿಂದ ಕೊಪ್ಪಳ ಮೂಲದ ಗಂಗಾವತಿಯ ಬಾನುಲೇಖ ಎಂಬ 11 ವರ್ಷದ ಬಾಲಕಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಳು. ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಬಾನುಲೇಖ ಚಿಕಿತ್ಸೆ ಪಡೆಯುತ್ತಿದ್ದಳು.
ಬಾಲಕಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೃದಯ ಕಸಿ ಮಾಡುವ ಬಗ್ಗೆ ವೈದ್ಯರ ತಂಡದ ಜೊತೆ ಚರ್ಚಿಸಿದ್ದರು. ಬಾಲಕಿಯ ಹೃದಯಕ್ಕೆ ಸರಿಹೊಂದುವ ಹೃದಯಕ್ಕಾಗಿ ಕಳೆದ 3 ತಿಂಗಳಿನಿಂದ ವೈದ್ಯರು ಕಾಯುತ್ತಿದ್ದರು. ನಿನ್ನೆ ಸಂಜೆ ಬೈಕ್ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದ ಯುವಕನ ಪೋಷಕರು ಅಂಗಾಂಗಗಳ ದಾನ ಮಾಡಲು ನಿರ್ಧರಿಸಿದ್ದರು.
ಯುವಕನಿಂದ ಪಡೆದ ಹೃದಯವನ್ನು ಜೆಪಿ ನಗರದ ಆಸ್ಟರ್ ಆಸ್ಪತ್ರೆಯಿಂದ 25 ನಿಮಿಷದಲ್ಲಿ 31 ಕಿಲೋಮೀಟರ್ ದೂರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ತಲುಪಿಸಲಾಗಿತ್ತು. ಸದ್ಯ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ‘ಹೃದಯ ಕಸಿ’ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.