ರಾಮನಗರ: ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗ್ತಿದ್ದರೆ, ಜನರಲ್ಲಿ ಅರಿವು ಮೂಡಿಸಬೇಕಾದ ಆರೋಗ್ಯ ಸಚಿವರೇ ಕೇರ್ಲೆಸ್ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರದಲ್ಲಿ ಇಂದು ಜಿಲ್ಲಾಡಳಿತದಿಂದ ತೆಗೆದುಕೊಂಡಿರುವ ಕೊರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ರು. ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯ ಮೂಲಕ ಕೊರೊನಾ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ, ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಹಲವಾರು ಅಧಿಕಾರಿಗಳು ಮಾಸ್ಕ್ ಧರಿಸದೇ ಸಭೆಯಲ್ಲಿ ಭಾಗಿಯಾಗಿದ್ರು. ಮಾಸ್ಕ್ ಧರಿಸದೇ ಸಭೆ ನಡೆಸಿದ್ದಲ್ಲದೇ ಸಭೆಯಲ್ಲಿ ಜನರಿಗೆ ಕೊರೊನಾ ಬಗ್ಗೆ ಮುಂಜಾಗ್ರತಾವಾಗಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಹಾಗೂ ಲಾಕ್ ಡೌನ್ ವಿಚಾರದಲ್ಲಿ ಮನೆಯಿಂದ ಹೊರಗೆ ಬರಬೇಡಿ ಎಂಬ ನೀತಿ ಪಾಠವನ್ನ ಹೇಳಿದರು.
ಸಭೆ ಬಳಿಕ ನೂತನವಾಗಿ ರಾಮನಗರದ ಹಳೇ ಕಂದಾಯ ಭವನದಲ್ಲಿ ನಿರ್ಮಿಸಿರುವ ಕೊರೊನಾ ಐಸೊಲೇಷನ್ ವಾರ್ಡಿಗೆ ಭೇಟಿ ನೀಡಿದಾಗಲು ಸಹ ಅಧಿಕಾರಿಗಳು ಹಾಗೂ ಸಚಿವರು ಮಾಸ್ಕ್ ಧರಿಸದೇ ಭೇಟಿ ನೀಡಿದ್ರು.
ಒಟ್ಟಿನಲ್ಲಿ ಅರಿವು ಮೂಡಿಸಬೇಕಾದ ಆರೋಗ್ಯ ಸಚಿವರು, ಆರೋಗ್ಯ ಅಧಿಕಾರಿಗಳೇ ಇಂತಹ ನಿರ್ಲಕ್ಷ್ಯತನ ತೋರಿದ್ದು ಸಾರ್ವಜನಿಕವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೂ ಕಾರಣವಾಗಿದೆ.