ಚಿಕ್ಕಮಗಳೂರು: ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೆಡ್ ಕಾನ್ಸ್ಟೇಬಲ್ ಠಾಣೆಯಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮೃತರನ್ನು ಪರಮೇಶ್ವರಪ್ಪ(51) ಎಂದು ಗುರುತಿಸಲಾಗಿದೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಮೇಶ್ವರಪ್ಪ ಠಾಣೆಯಲ್ಲಿಯೇ ಅಸ್ವಸ್ಥರಾಗಿದ್ದರು. ಹಾಗಾಗಿ ಠಾಣೆಯಲ್ಲಿದ್ದ ಸಿಬ್ಬಂದಿ ಕೂಡಲೇ ಅವರನ್ನು ಮೂಡಿಗೆರೆ ಪಟ್ಟಣದ ಎಂ.ಜಿ.ಎಂ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಾಕಾರಿಯಾಗದೇ ಪರಮೇಶ್ವರಪ್ಪ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: 3 ವಾರದಿಂದ ಮನೆಯಲ್ಲೇ ಬಂಧಿ- ಆಹಾರಕ್ಕಾಗಿ ಶಾಂಘೈ ನಿವಾಸಿಗಳ ಆಕ್ರಂದನ
ಕೆ.ಬಿ.ಪರಮೇಶ್ವರಪ್ಪ ಮೂಲತಃ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿ ಕಣಿವೆಹಳ್ಳಿ ಮೂಲದವರಾಗಿದ್ದು, ಕಳೆದ ಐದು ವರ್ಷಗಳಿಂದ ಬಣಕಲ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆ.ಬಿ. ಪರಮೇಶ್ವರಪ್ಪ ಅವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಕಣಿವೆಹಳ್ಳಿಯ ಅವರ ಖಾಸಗಿ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೂಡಿಗೆರೆ ವೃತ್ತ ನಿರೀಕ್ಷಕ ಸೋಮಶೇಖರ್, ಬಣಕಲ್ ಠಾಣೆ ಪಿ.ಎಸ್.ಐ ಗಾಯತ್ರಿ, ಬಾಳೂರು ಠಾಣೆ ಪಿ.ಎಸ್.ಐ ರೇಣುಕಾ, ಕೊಪ್ಪ ಠಾಣೆ ಪಿ.ಎಸ್.ಐ ಶ್ರೀನಾಥ್ ರೆಡ್ಡಿ, ಕಳಸ ಠಾಣೆ ಎ.ಎಸ್.ಐ ಮೋಹನ್ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಮೃತರ ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: ಒಟ್ಟು 34 ಕೇಸ್ – ಬೆಂಗ್ಳೂರು ಹೊರತು ಪಡಿಸಿ ಏಕೈಕ ಜಿಲ್ಲೆಯಲ್ಲಿ ಪಾಸಿಟಿವ್ ಕೇಸ್