ಕೋಲ್ಕತ್ತಾ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಅವರು, ತಮ್ಮ ಪಕ್ಷದ ವಿರೋಧಿಗಳನ್ನು ಟೀಕಿಸಿ ಭಾಷಣ ಮಾಡುವ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸುಗತ ರಾಯ್ ಬೂಟುಗಳಿಂದ ಹೊಡೆತ ತಿನ್ನಬೇಕಾಗುತ್ತದೆ ಎಂದು ಹೇಳುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ನಾಯಕರಿಗೆ ಔಪಚಾರಿಕ ಶಿಕ್ಷಣ ಸಿಕ್ಕಿಲ್ಲ ಎಂದು ಸುಗತ ರಾಯ್ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ದಿಲೀಪ್ ಘೋಷ್ ಅವರು, ಬಿಜೆಪಿ ಪಕ್ಷದ ಬೆಂಬಲ ಕಳೆದುಕೊಂಡ ನಂತರ ಅವರು ಟಿಎಂಸಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣೆ ಹಿನ್ನೆಲೆಯಲ್ಲಿ ಸದ್ಯದಲ್ಲೇ ದಿಲೀಪ್ ಘೋಷ್ ಬಿಜೆಪಿ ಬಿಟ್ಟು ಟಿಎಂಸಿ ಸೇರಲು ಪ್ಲಾನ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪತ್ನಿ ಜೊತೆಗೆ ದೇವಾಲಯಕ್ಕೆ ರಿಷಿ ಸುನಕ್ ಭೇಟಿ
ಟಿಎಂಸಿಯ ನಾಯಕರಾದ ಪಾರ್ಥ ಚಟರ್ಜಿ ಮತ್ತು ಅನುಬ್ರತಾ ಮೊಂಡಲ್ ಅವರನ್ನು ಬೇರೆ, ಬೇರೆ ಪ್ರಕರಣಗಳಲ್ಲಿ ಬಂಧಿಸಿದ ನಂತರ ಸುಗತ ರಾಯ್ ಪ್ರತಿಭಟನೆಯ ನೆಪದಲ್ಲಿ ಪಕ್ಷವನ್ನು ಕೆಡಿಸುವ ಮೂಲಕ ತಪ್ಪಿಸಿಕೊಳ್ಳಬಹುದು ಎಂದು ಅಂದುಕೊಂಡಿರುವವರ ಚರ್ಮವನ್ನು ಸುಲಿದು ಶೂಗಳನ್ನು ತಯಾರಿಸಲಾಗುವುದು ಎಂದು ಹೇಳಿದ್ದರು. ವಿರೋಧ ಪಕ್ಷವಾದ ಬಿಜೆಪಿ ವಿರುದ್ಧ ಟೀಕಿಸುವವರು ಕೊನೆಗೆ ಅವರೇ ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಸೌಗತಾ ರಾಯ್ ಒಬ್ಬ ಹಿರಿಯ ರಾಜಕಾರಣಿ. ಅವರು ಒಂದು ಕಾಲದಲ್ಲಿ ಪ್ರಾಧ್ಯಾಪಕರಾಗಿದ್ದರು. ಆದರೆ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಭಾಷೆ ಸರಿಯಿಲ್ಲ. ಚರ್ಮ ಸುಲಿದು ಶೂ ತಯಾರಿಸಲಾಗುವುದು ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳುತ್ತಿದ್ದಾರೆ. ಜನ ಅವರಿಗೆ ಚಪ್ಪಲಿಯಿಂದ ಹೊಡೆಯುವ ದಿನ ದೂರವಿಲ್ಲ. ರಾಜ್ಯದ ವಿವಿಧೆಡೆ ಟಿಎಂಸಿ ನಾಯಕರನ್ನು ಶೂಗಳಿಂದ ಥಳಿಸಲಾಗುವುದು ಎಂದು ಘೋಷ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ಮುಗಿಸಲಾಗುವುದು- ಎನ್ಸಿಬಿ ಮಾಜಿ ಅಧಿಕಾರಿ ಸಮೀರ್ ವಾಂಖೆಡೆಗೆ ಜೀವ ಬೆದರಿಕೆ
ಈ ಬಗ್ಗೆ ಮಾತನಾಡಿದ ಸುಗತ ರಾಯ್, ದಿಲೀಪ್ ಘೋಷ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಔಪಚಾರಿಕ ಶಿಕ್ಷಣವಿಲ್ಲದ ವ್ಯಕ್ತಿ ಏನು ಹೇಳುತ್ತಿದ್ದಾರೆ ಎಂಬುದರ ಕುರಿತು ಪ್ರತಿಕ್ರಿಯಿಸುವುದು ನನ್ನ ಘನತೆಗೆ ತಕ್ಕದ್ದಲ್ಲ. ದಿಲೀಪ್ ಘೋಷ್ ಅವರಿಗೆ ಬಿಜೆಪಿ ನಾಯಕತ್ವದ ವಿಶ್ವಾಸವಿಲ್ಲದ ಕಾರಣ ನಮ್ಮ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಶಾಲಾ ನೇಮಕಾತಿ ವಂಚನೆಯಲ್ಲಿನ ಅಕ್ರಮಕ್ಕಾಗಿ ಪಾರ್ಥ ಚಟರ್ಜಿ ಅವರನ್ನು ಇಡಿ ಬಂಧಿಸಿತ್ತು. ದನ ಕಳ್ಳಸಾಗಣೆ ಪ್ರಕರಣದಲ್ಲಿ ಅನುಬ್ರತಾ ಮೊಂಡಲ್ ಅವರನ್ನು ಸಿಬಿಐ ಬಂಧಿಸಿತ್ತು. ಇವರಿಬ್ಬರ ಬಂಧನದ ನಂತರ ಬಿಜೆಪಿ ಮತ್ತು ಟಿಎಂಸಿ ನಾಯಕರ ನಡುವೆ ಈ ಕೆಸರೆರಚಾಟ ನಡೆದಿದೆ.