ಮುಂಬೈ: ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮತ್ತೆ ವೈಯಕ್ತಿಕ ವಿಚಾರವಾಗಿ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ನಮಗೆ ಹೆಣ್ಣು ಮಕ್ಕಳು, ಪತ್ನಿ ಹಾಗೂ ಸಂಬಂಧಿಕರಿದ್ದಾರೆ. ಆದರೆ ನರೇಂದ್ರ ಮೋದಿಗೆ ಯಾರೂ ಇಲ್ಲ. ನಮ್ಮಂತೆ ಪರಿವಾರ ನಿರ್ವಹಣೆ ಮಾಡಿದ ಅನುಭವವೇ ಅವರಿಗಿಲ್ಲ. ಹೀಗಾಗಿ ಬೇರೆಯವರ ಕುಟುಂಬದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ಅವರು ನಿಲ್ಲಿಸಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಕುಟುಂಬದ ಬಗ್ಗೆ ಮಾತನಾಡುವ ಮೂಲಕ ತಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಆದರೆ ಬರಗಾಲ, ರೈತರು, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರಿದರು.
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದಿದ್ದ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಅವರು, ಶರದ್ ಪವಾರ್ ಅವರ ಕುಟುಂಬ ರಾಜಕೀಯ ಹಾಗೂ ಪವಾರ್ ಕುಟುಂಬವನ್ನು ಉದ್ದೇಶಿಸಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಶರದ್ ಪವಾರ್ ಅವರು, ಪ್ರಧಾನಿ ಏಕಾಂಗಿ ಜೀವನವನ್ನು ನಡೆಸುತ್ತಿದ್ದು ಅವರಿಗೆ ಕುಟುಂಬ ನಿರ್ವಹಣೆಯ ಬಗ್ಗೆ ಅರಿವಿಲ್ಲ ಎಂದಿದ್ದರು.