ಕಂಗ್ರಾ: ಹಿಮಾಚಲ ರಾಜ್ಯವನ್ನು ಭ್ರಷ್ಟಾಚಾರ, ಕುಟುಂಬ ರಾಜಕಾರಣ ಹಾಗೂ ಜಾತಿ ರಾಜಕಾರಣದಿಂದ ರಕ್ಷಿಸುವ ತುರ್ತು ಅಗತ್ಯವಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಿಮಾಚಲ ಪ್ರದೇಶ ಚುನಾವಣೆಗೆ ಕೇವಲ ಏಳು ದಿನಗಳು ಉಳಿದಿರುವ ಹಿನ್ನಲೆಯಲ್ಲಿ ಗುರುವಾರ ಕಂಗ್ರಾದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ರಾಜ್ಯವನ್ನು ಭ್ರಷ್ಟಚಾರದಿಂದ ರಕ್ಷಿಸಬೇಕಾಗಿದೆ ಎಂದು ಕಾಂಗ್ರೆಸ್ ಪಕ್ಷ ನಗೆಪಾಟಲಿನ ಕ್ಲಬ್ ಎಂದು ಆರೋಪ ಮಾಡಿದರು.
ಈ ಸಂದರ್ಭದಲ್ಲಿ ದೇಶದ ಡೊಕ್ಲಾಮ್ ಗಡಿ ಸಮಸ್ಯೆಯನ್ನು ಕೇಂದ್ರವು ಹೇಗೆ ಬಗೆಹರಿಸಿದೆ ಎಂದು ಇಡೀ ದೇಶದ ಜನರಿಗೆ ತಿಳಿದಿದೆ. ಆದರೇ ಕೆಲವು ಉನ್ನತ ಕುಟುಂಬದಲ್ಲಿ ಜನಿಸಿದ ವ್ಯಕ್ತಿಗಳಿಗೆ ದೇಶದ ಸೈನಿಕರು ಹಾಗೂ ಸಂಸ್ಥೆಗಳ ಬಗ್ಗೆ ನಂಬಿಕೆ ಇರುವುದಿಲ್ಲ. ಅದರಿಂದಲೇ ಅವರು ಚೀನಾ ದೇಶದ ವಿದೇಶಾಂಗ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಾರೆ ಎಂದು ರಾಹುಲ್ ಗಾಂಧಿಗೆ ಪರೋಕ್ಷ ಟಾಂಗ್ ನೀಡಿದರು.
ಹಿಮಾಚಲ ರಾಜ್ಯದ ಜನತೆ ಸ್ಥಳೀಯ ಬಿಜೆಪಿ ನಾಯಕ ಮೇಲೆ ಉತ್ತಮ ವಿಶ್ವಾಸವನ್ನು ಹೊಂದಿದ್ದಾರೆ. ಆದ್ದರಿಂದ ನಾನು ಇಲ್ಲಿ ಬಂದು ಪ್ರಚಾರ ನಡೆಸುವ ಅಗತ್ಯವಿಲ್ಲ ಎಂದು ಪಕ್ಷದ ಮುಖಂಡರಿಗೆ ಹೇಳಿದ್ದೆ. ಅಲ್ಲದೇ ಹಿಮಾಚಲ ಪ್ರದೇಶದ ಕಾಂಗ್ರೆಸ್ ಪಕ್ಷದ ಸಿಎಂ ವೀರಭದ್ರ ಸಿಂಗ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಕ್ಲೀನ್ ಚಿಟ್ ನೀಡಿ ಅವರನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿದೆ. ದೇವರ ನಾಡಲ್ಲಿ ಭ್ರಷ್ಟಚಾರದಿಂದ ಕೂಡಿರುವ ರಾಕ್ಷಸರು ಆಡಳಿತವನ್ನು ಮಾಡುತ್ತಿದ್ದಾರೆ. ರಾಜ್ಯವನ್ನು ಗಣಿ ,ಅರಣ್ಯ , ಡ್ರಗ್, ಟೆಂಡರ್ ಮಾಫಿಯಾ ಹಾಗೂ ವರ್ಗಾವಣೆ ಮಾಫಿಯಾದಿಂದ ರಕ್ಷಿಸ ಬೇಕಿದೆ ಎಂದರು.
ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ವಿಧಾನಸಭಾ ಕ್ಷೇತ್ರಗಳಿದ್ದು, ನವೆಂಬರ್ 09 ರಂದು ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 18 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.