ಮಂಡ್ಯ: ರಣ ಬಿಸಿಲಿನ ಕಾವು ಹೆಚ್ಚಾದ್ದಂತೆ ಮಂಡ್ಯ ಲೋಕ ಅಖಾಡದ ಕಾವು ಜೋರಾಗ್ತಿದೆ. ಮೈತ್ರಿ ಅಭ್ಯರ್ಥಿಯನ್ನ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ʻಕೈʼಪಡೆ ಹಳ್ಳಿ ಹಳ್ಳಿಗಳಲ್ಲಿ ಭರ್ಜರಿ ಪ್ರಚಾರ ನಡೆಸ್ತಿದೆ. ಕಾಂಗ್ರೆಸ್ ನ ಕ್ಯಾಂಪೇನ್ (Congress Election Campaign) ಸ್ಪೀಡ್ ಹೆಚ್ಚಾಗ್ತಿದ್ದಂತೆ ಅಲರ್ಟ್ ಆಗಿರುವ ಮೈತ್ರಿ ಅಭ್ಯರ್ಥಿ ದೋಸ್ತಿ ನಾಯಕರೊಂದಿಗೆ ಮತ್ತೆ ಮಂಡ್ಯ ಪ್ರಚಾರ ಅಖಾಡಕ್ಕೆ ಧುಮುಕಲು ರೆಡಿಯಾಗಿದ್ದಾರೆ. ಆ ಮೂಲಕ ಕೈ ಅಭ್ಯರ್ಥಿ ಮಣಿಸುವ ಪ್ಲ್ಯಾನ್ ಮಾಡಿದ್ದಾರೆ.
ಮಂಡ್ಯ ಲೋಕಸಭಾ ಅಖಾಡ ದಿನೇ ದಿನೇ ರಂಗೇರುತ್ತಿದೆ. ಅದರಲ್ಲಿಯೂ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಮೈತ್ರಿ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಿರುವುದರಿಂದ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕೈ ಪಡೆ, ಹೆಚ್ಡಿಕೆ ಸೋಲಿಸಿ ಮಣ್ಣು ಮುಕ್ಕಿಸಲೇಬೇಕೆಂದು ಪಣ ತೊಟ್ಟಿದೆ. ಜಿಲ್ಲೆಯಾದ್ಯಂತ ಭರ್ಜರಿ ಕ್ಯಾಂಪೇನ್ ನಡೆಸುತ್ತಿರುವ ಕೈ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಈಗಾಗಲೇ 3ನೇ ಸುತ್ತಿನ ಪ್ರಚಾರ ಆರಂಭಿಸಿದ್ದಾರೆ. ಮತ್ತೊಂದೆಡೆ ಸಚಿವರು, ಶಾಸಕರು ಸೇರಿದಂತೆ ಕೈ ನಾಯಕರು ಕ್ಯಾಂಪೇನ್ ನಲ್ಲಿ ತೊಡಗಿದ್ದಾರೆ. ಇದೀಗ ಕೈ ಪಡೆಯ ಪ್ರಚಾರದ ವೇಗ ಅರಿತಿರುವ ದೋಸ್ತಿ ಅಭ್ಯರ್ಥಿ ಹೆಚ್ಡಿಕೆ ಖುದ್ದು ತಾವೇ ಕ್ಯಾಂಪೇನ್ (Election Campaign) ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 8 ದಿನ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮಿಂಚಿನ ವೇಗದಲ್ಲಿ ಪ್ರಚಾರ ನಡೆಸಲು ಡೇಟ್ ಕೂಡ ಫಿಕ್ಸ್ ಮಾಡಿಕೊಂಡಿದ್ದಾರೆ.
ಮಂಡ್ಯದಲ್ಲಿ ಯಾವಾಗ-ಎಲ್ಲಿಲ್ಲಿ ಪ್ರಚಾರ?
ಮಂಡ್ಯ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದ್ದು, 8 ಕ್ಷೇತ್ರದಲ್ಲಿಯೂ ಸಮಾವೇಶ ನಡೆಸಿ ಮತದಾರರ ಗಮನ ಸೆಳೆಯಲು, ಮತದಾರರ ಮನೆ, ಮನ ತಲುಪಲು ಹೆಚ್ಡಿಕೆ ಮುಂದಾಗಿದ್ದಾರೆ. ಆದ್ದರಿಂದ ಏ.16 ರಿಂದ ಏ.24ರ ವರೆಗೆ ಪ್ರಚಾರ ಸಮಾವೇಶ ನಡೆಸಲು ರೆಡಿಯಾಗಿದ್ದಾರೆ. ಏ.16 ಮಳವಳ್ಳಿ, 17 ಕೆ.ಆರ್ ಪೇಟೆ, 18 ಕೆ.ಆರ್ ನಗರ, 19 ಮೇಲುಕೋಟೆ, 21 ಶ್ರೀರಂಗಪಟ್ಟಣ, 22 ನಾಗಮಂಗಲ, 23 ಮದ್ದೂರು, 24 ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಆ ಮೂಲಕ ಕೈ ಅಭ್ಯರ್ಥಿಗೆ ಸೋಲುಣಿಸಿ, ಕೈ ನಾಯಕರಿಗೆ ಟಕ್ಕರ್ ಕೊಡಲು ಮಾಜಿ ಸಿಎಂ ಕುಮಾರಸ್ವಾಮಿ ರೆಡಿಯಾಗಿದ್ದಾರೆ. ಹೆಚ್ಡಿಕೆ ಜೊತೆ ಬಿಜೆಪಿಯ ರಾಜ್ಯ ನಾಯಕರು ಸಮಾವೇಶದಲ್ಲಿ ಭಾಗಿಯಾಗಲಿದ್ದು, ದೋಸ್ತಿ ಪಡೆ ಒಟ್ಟಾಗಿ ಕಾಂಗ್ರೆಸ್ ಮಣಿಸಲು ತಯಾರಾಗಿದ್ದಾರೆ.
ಇನ್ನೂ ಹೆಚ್ಡಿಕೆ ಒಂದು ಕಡೆ ತಾಲೂಕು ಮಟ್ಟದಲ್ಲಿ ಬೃಹತ್ ಸಮಾವೇಶದ ಮೂಲಕ ಕ್ಯಾಂಪೇನ್ ಮಾಡಿದ್ರೆ, ಇತ್ತ ಪುತ್ರ ನಿಖಿಲ್ ತಂದೆ ಗೆಲುವಿಗಾಗಿ ಜಿಲ್ಲೆಯ ಎಲ್ಲ ಕ್ಷೇತ್ರದಲ್ಲಿಯೂ ಹೋಬಳಿವಾರು ಸಭೆ, ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಶನಿವಾರದಿಂದಲೇ ನಿಖಿಲ್ ಅಖಾಡಕ್ಕೆ ಧುಮುಕಲಿದ್ದಾರೆ. ಅದರ ಜೊತೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಶಾಸಕರು ಸ್ಥಳೀಯ ಮೈತ್ರಿ ನಾಯಕರು, ಕಾರ್ಯಕರ್ತರೊಂದಿಗೆ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಇಂದಿನಿಂದಲೇ ಶಾಸಕ, ಮಾಜಿ ಶಾಸಕರು ತಮ್ಮ ನಾಯಕ, ಮೈತ್ರಿ ಅಭ್ಯರ್ಥಿ ಹೆಚ್ಡಿಕೆ ಪರ ಕ್ಯಾಂಪೇನ್ ನಲ್ಲಿ ತೊಡಗುತ್ತಿದ್ದಾರೆ.
ಕೈ ಪಡೆಯ ಕ್ಯಾಂಪೇನ್ ಸ್ಪೀಡ್ ಕಂಡ ದೋಸ್ತಿ ಪಡೆ ಹೈ ಅಲರ್ಟ್ ಆಗಿದೆ. ಖುದ್ದು ತಾವು ಅಖಾಡಕ್ಕೆ ಧುಮುಕುವ ಮೂಲಕ ಕೈ ಪಡೆಗೆ ಸೋಲಿಣಿಸಲು ಸರ್ವ ಪ್ರಯತ್ನ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಆದ್ರೆ ಮತದಾರರು ಯಾರಿಗೆ ಜೈ ಅಂತಾನೆ, ಯಾರಿಗೆ ಕೈ ಕೊಡ್ತಾನೆ ಎಂದು ಚುನಾವಣೆ ನಡೆದು ಫಲಿತಾಂಶ ಬರುವವರೆಗೂ ಕಾಯಬೇಕಿದೆ.