ರಾಮನಗರ: ರಾಜ್ಯ ಸರ್ಕಾರ ಇರುವುದು ರಾಜ್ಯದ ಅಭಿವೃದ್ಧಿಗೆ. ಆದರೆ ದ್ವೇಷದ ರಾಜಕಾರಣ, ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡುವುದರಲ್ಲಿ ಸಂಕುಚಿತ ಮನೋಭಾವವನ್ನು ಹೊಂದಿದ್ದು ಈ ಬಗ್ಗೆ ಕಲಾಪದಲ್ಲೇ ಚರ್ಚೆ ಮಾಡ್ತೇನೆ. ನನ್ನ ಕ್ಷೇತ್ರದಲ್ಲಿಯೂ ಹಲವಾರು ಕಡೆ ಅನುದಾನ ಕಟ್ ಮಾಡಿದ್ದಾರೆ. ಇಲಾಖೆಯ ಮಂತ್ರಿ, ಅಧಿಕಾರಿಗಳು ಸ್ಪಂದಿಸಿದ್ದರೂ ಅಂತಿಮವಾಗಿ ಸಿಎಂ ತೀರ್ಮಾನವಾಗಬೇಕು. ಅವರ ಮುಂದೆ ಫೈಲ್ಗಳಿವೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಮನಗರ ತಾಲೂಕಿನ ಕೈಲಾಂಚ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ಗೋಪುರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಇಬ್ಬರೂ ಭಾಗಿಯಾಗಿದ್ರು. ಇದೇ ವೇಳೆ ಮಾತನಾಡಿದ ಅವರು, ದ್ವೇಷದ ರಾಜಕೀಯ ನಿರಂತರವಾಗಿ ನಡೆಯುತ್ತಿದೆ. ನನ್ನ ಕ್ಷೇತ್ರದಲ್ಲೂ ಅನುದಾನ ಕಟ್ ಆಗಿದ್ದು ಸಂಬಂಧಪಟ್ಟ ಅಧಿಕಾರಿಗಳು, ಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಆದರೆ ಸಿಎಂ ಬಳಿ ಫೈಲ್ಗಳಿವೆ ಯಾವಾಗ ಕಡತಗಳಿಗೆ ಸೈನ್ ಬೀಳುತ್ತೆ ಅಂತ ಕಾಯ್ತಿದ್ದೇನೆ ಎಂದು ತಿಳಿಸಿದ್ರು.
ಅಲ್ಲದೇ ರಾಜ್ಯ ಸರ್ಕಾರದಲ್ಲಿನ ದ್ವೇಷದ ರಾಜಕೀಯ, ತಮ್ಮ ಆಳ್ವಿಕೆಯ ವೇಳೆ ನೀಡಿದ ಅನುದಾನಗಳ ತಡೆಯುವಂತಹ, ಸ್ಥಗಿತಗೊಳಿಸಿರುವಂತಹ ಕೆಲಸ ಆಗಿರುವ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಚರ್ಚೆ ಮಾಡ್ತೇನೆ. ಇಂತಹ ವಿಷಯಗಳನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡದೇ ಇನ್ನೆಲ್ಲಿ ಮಾಡಲು ಸಾಧ್ಯ. ರಾಜ್ಯಪಾಲರ ಭಾಷಣ ಮಾಡುವವರಿದ್ದಾರೆ. ಅವರ ಭಾಷಣದ ಆಧಾರದ ಮೇಲೆ ನಡೆಯುವ ಚರ್ಚೆಯ ವೇಳೆ ಎಲ್ಲವನ್ನು ಪ್ರಸ್ತಾಪ ಮಾಡಲಿದ್ದೇನೆ. ಸರ್ಕಾರ ಏನ್ ಉತ್ತರ ಕೊಡುತ್ತೆ ನೋಡೋಣ ಎಂದು ತಿಳಿಸಿದ್ರು.
ಸರ್ಕಾರ ಆಯಾತಪ್ಪಿದಾಗಲೆಲ್ಲ ವಿರೋಧ ಪಕ್ಷದ ಶಾಸಕರುಗಳಾಗಿ ಸರ್ಕಾರವನ್ನ ಎಚ್ಚರಿಸುವಂತಹ ಕೆಲಸವನ್ನ ಮಾಡುತ್ತಿದ್ದೇವೆ. ಆ ಹೋರಾಟವನ್ನ ಈಗಲೂ ಮುಂದುವರಿಸಲಿದ್ದೇವೆ. ಎಚ್ಡಿ ದೇವೇಗೌಡರ ನೇತೃತ್ವದಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದ್ರು.
ಅಲ್ಲದೇ 2008ರಲ್ಲೂ ಸಹ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ 5 ವರ್ಷ ಅಭಿವೃದ್ಧಿಗೆ ಯಾವುದೇ ಸಹಕಾರ ದೊರಕಿರಲಿಲ್ಲ. ಸರ್ಕಾರಕ್ಕೆ ಜ್ಞಾನೋದಯ ತರಲಿಕ್ಕೆ ಪ್ರಯತ್ನ ಪಡುತ್ತೇನೆ ಎಂದು ತಿಳಿಸಿದ್ರು.
ಇದೇ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗುವುದು ದೇಶದ್ರೋಹಿ ಕೆಲಸವಾಗಿದ್ದು ಅಂತಹ ವಿಷಯದಲ್ಲಿ ಯುವಕರು ಯಾವುದೋ ಚಿತಾವಣೆಗೆ ಹಾಗೂ ನಿಮ್ಮ ಭಾವನೆಗಳಲ್ಲಿ ವಿಕೃತ ಭಾವನೆಗಳಿಗೆ ಆಸ್ಪದ ಕೊಡಬೇಡಿ. ನಾವೆಲ್ಲರೂ ಭಾರತೀಯರಿದ್ದೇವೆ ನಮ್ಮ ದೇಶದ ವಿಷಯದಲ್ಲಿ ನೀವು ಪಾಕ್ ಪರವಾಗಿ ಜಯ ಘೋಷಣೆ ಕೂಗೋದ್ರಿಂದ ಯಾವುದೇ ಬೆಂಬಲ ಸಿಗಲ್ಲ. ಇಂತಹ ವಿಷಯದಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳಿ ಎಂದು ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಯುವಕರಿಗೆ ಹಾಗೂ ಯುವ ಸಮುದಾಯಕ್ಕೆ ಕಿವಿಮಾತು ಹೇಳಿದ್ರು.