ಹಾಸನ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರುದ್ಧ ಟೀಕೆ ಮಾಡಿ ಮಾತನಾಡಿದ್ದ ಬಿಜೆಪಿ ಮುಖಂಡ ಶ್ರೀನಿವಾಸ ಪ್ರಸಾದ್ ಅವರನ್ನು ಲೋಕೋಪಯೋಗಿ ಸಚಿವ ರೇವಣ್ಣ ಅವರು ಏಕವನದಲ್ಲೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಹೊಳೆನರಸೀಪುರ ತಾಲೂಕು ಕಳ್ಳಿಕೊಪ್ಪಲು ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಂದೆಯನ್ನ ಟೀಕಿಸಿದ್ದಕ್ಕೆ ಕೆಂಡಾಮಂಡಲವಾಗಿ ತಿರುಗೇಟು ನೀಡಿ, ಯಾವನ್ರೀ ಅವ್ನು ಶ್ರೀನಿವಾಸ್ ಪ್ರಸಾದ್? ಪ್ರಧಾನಿಯಾಗಿ ದೇವೇಗೌಡರು ದೆಹಲಿಗೆ ಓಡಾಡ್ಕೊಂಡು ಇರಲಿಲ್ಲ. ದೇವೇಗೌಡರು ಏನು ಕೆಲಸ ಮಾಡಿದ್ದಾರೆ ಎಂಬುವುದು ಚರ್ಚೆ ಆಗಲಿ ಎಂದು ಸವಾಲು ಎಸೆದರು.
ರಾಜ್ಯದಲ್ಲಿ ಬಿಜೆಪಿಗೆ 18 ಮಂದಿ ಸಂಸದರನ್ನು ನೀಡಿದರೂ ಕೂಡ ಕಾವೇರಿ ಹಾಗೂ ಮಹದಾಯಿ ಬಗ್ಗೆ ಹೋರಾಟ ಮಾಡಿಲ್ಲ. ಆದರೆ ಈಗ ಟಿವಿ ಮುಂದೆ ಟೀಕೆ ಮಾಡುತ್ತಾರೆ. ಶಿವಮೊಗ್ಗವನ್ನು ಯಡಿಯೂರಪ್ಪ ಅವರ ಮಕ್ಕಳಿಗೆ ಬರೆದುಕೊಟ್ಟಿದ್ದಾರ? ಅಚನಾಕ್ ಆಗಿ ಶಾಸಕನಾದರೆ ಹೀಗೆ ಮಾತನಾಡುತ್ತಾರೆ. ಈ ಬಾರಿ ಬಿಜೆಪಿಗೆ ಜನ ಸರಿಯಾದ ಪಾಠ ಕಲಿಸುತ್ತಾರೆ ಎಂದು ಹೆಸರು ಹೇಳದೆಯೇ ಪ್ರೀತಂಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನು ಓದಿ: ಕರ್ನಾಟಕ ಗೌಡರ ಅಪ್ಪನ ಮನೆ ಆಸ್ತಿನಾ – ಬಿಜೆಪಿ ಶಾಸಕ ಪ್ರೀತಂಗೌಡ ಪ್ರಶ್ನೆ
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಮುಂದುವರಿಯುತ್ತದೆ. ಯಾವುದೇ ಅಪಾಯ ಇಲ್ಲ, ಮಾಧ್ಯಮದವರು ಅಂತಹ ಹೇಳಿಕೆಗಳ ಬಗ್ಗೆ ಹೆಚ್ಚು ಮಹತ್ವ ನೀಡುವುದು ಬೇಡ. ದೇವೇಗೌಡ್ರು, ಸಿಎಂ ಕುಮಾರಸ್ವಾಮಿ ಏನು ಕೆಲಸ ಮಾಡಿದ್ದಾರೆ ಎನ್ನುವುದು ಜನರಿಗೆ ತಿಳಿದಿದೆ. ಜನರಿಗೆ ಕೂಲಿ ನೀಡುವಂತೆ ದಿನಕ್ಕೆ 17 ರೂ. ನೀಡುತ್ತಿದ್ದಾರೆ. ರೈತರ ಸಾಲಮನ್ನಾ ಮಾಡುವ ಕಾರ್ಯ ರಾಜ್ಯ ಸರ್ಕಾರ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಕೆಲ ದಿನಗಳಲ್ಲೇ ಮೂಲೆಗುಂಪಾಗುತ್ತದೆ. ಜನರಿಗೆ ಎಲ್ಲವೂ ಕೂಡ ತಿಳಿದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯಲ್ಲೂ ಕೂಡ ನಮ್ಮ ಮೈತ್ರಿ ಮುಂದುವರಿಯುತ್ತದೆ. ರಾಜ್ಯದಲ್ಲಿ ಜೆಡಿಎಸ್ ಎಷ್ಟು ಸ್ಥಾನ ಗೆಲ್ಲುವ ಶಕ್ತಿಯನ್ನು ಹೊಂದಿದೆಯೋ ಅಷ್ಟು ಸ್ಥಾನಗಳನ್ನು ದೇವೇಗೌಡರು ರಾಹುಲ್ ಗಾಂಧಿ ಅವರನ್ನು ಕೇಳಿದ್ದಾರೆ. ಶೀಘ್ರವೇ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv