ಬೆಂಗಳೂರು: ಮೈತ್ರಿ ಸರ್ಕಾರ ಆಡಳಿತ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿರುವ ಕಾಂಗ್ರೆಸ್ ಪಕ್ಷದ ಶಾಸಕರು ತಮ್ಮ ವಿರುದ್ಧ ಮಾಡಿದ್ದ ಆರೋಪಗಳಿಗೆ ಲೋಕೋಪಯೋಗಿ ಸಚಿವ ರೇವಣ್ಣ ಅವರು ಉತ್ತರ ನೀಡಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲ. ಬಡ ಮಕ್ಕಳ ಅನುಕೂಲತೆಗೆ 1 ಸಾವಿರ ಕನ್ನಡ ಶಾಲೆಗಳನ್ನು ಆರಂಭ ಮಾಡಿ ಎಂದು ಮನವಿ ಮಾಡಿದ್ದೆ ಇದೇ ನನ್ನ ತಪ್ಪಾ ಎಂದು ಕೇಳಿದ್ದಾರ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಇಲಾಖೆಗೆ ಸಂಬಂಧಪಟ್ಟ ಬೆಂಗಳೂರು ರಸ್ತೆಯ ಅಭಿವೃದ್ಧಿ ವಿಚಾರದಲ್ಲಷ್ಟೇ ನಾನು ಕೆಲಸ ಮಾಡಿದ್ದೇನೆ. ಬೇರೆ ಯಾವುದೇ ಇಲಾಖೆಯಲ್ಲೂ ಕೂಡ ನಾನು ಮಧ್ಯಪ್ರವೇಶ ಮಾಡಿಲ್ಲ. ನನ್ನ ಇಲಾಖೆಯ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದು, ಅದು ಬಿಟ್ಟು ಬೇರೆಯವರ ವಿಚಾರದಲ್ಲಿ ನಾನೇನು ಮಾಡಿಲ್ಲ. ನಾನು ಮಾಡಿದ ತಪ್ಪು ಅಂದರೆ ಕನ್ನಡ ಶಾಲೆ ಬೇಕು ಎಂದು ಹೇಳಿ ಬಡ ಮಕ್ಕಳಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ 1 ಸಾವಿರ ಕನ್ನಡ ಶಾಲೆಗಳನ್ನು ಆರಂಭಿಸಲು ಮನವಿ ಮಾಡಿದ್ದೆ ಎಂದು ಸ್ಪಷ್ಟನೆ ನೀಡಿದರು.
ಮುಜರಾಯಿ ಇಲಾಖೆಗೆ ಸೇರಿದ ಸ್ಥಳ ತಿರುಪತಿಯಲ್ಲಿ ಇದ್ದು, ಆದರ ಅಭಿವೃದ್ಧಿ ನಮ್ಮ ಇಲಾಖೆಯಿಂದಲೇ ನಡೆಯುತ್ತಿದೆ. ವಿವಿಧ ರಸ್ತೆಗಳ ಕೆಲಸಗಳನ್ನು ಮಾಡುತ್ತಿದ್ದೇವೆ. ಇದರಲ್ಲಿ ಪ್ರಮುಖವಾಗಿ ಮಹಾದೇಶ್ವರ ದೇವಸ್ಥಾನಕ್ಕೆ ಮೆಟ್ಟಿಲು, ದಸರಾಗೆ ಅನುಕೂಲವಾಗುವಂತೆ ರಸ್ತೆ, ತಲಕಾಡು ರಸ್ತೆ ಅಭಿವೃದ್ಧಿ ಕೆಲಸಗಳು ಸೇರಿದೆ. ನಾನು ಜೀವನದಲ್ಲಿ ತಪ್ಪು ಮಾಡಿದರೆ ಮಹಾ ಲಕ್ಷ್ಮಿ ದೇವಿ ನೋಡಿಕೊಳ್ಳಲಿ ಎಂದರು.
ಬೆಂಗಳೂರು ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ಇಲಾಖೆಗೆ ಸಂಬಂಧಿಸಿದ ಕೆಲಸವನಷ್ಟೇ ಮಾಡಿದ್ದೇನೆ. ಅದು ಬಿಟ್ಟು ಬೇರೆಯವರ ಇಲಾಖೆಯ ವಿಚಾರದಲ್ಲಿ ನಾನೇನು ಮಾಡಿಲ್ಲ. ಔಟರ್ ರಿಂಗ್ ರೋಡ್ ಕೆಲಸಕ್ಕೆ ಹಣವನ್ನು ಬಿಡುಗಡೆ ಮಾಡಿದ್ದು, ಈ ಹಿಂದೆ ನಾನು ಲೋಕೋಪಯೋಗಿ ಸಚಿವರಾಗಿದ್ದ ವೇಳೆ ಆರಂಭ ಮಾಡಿ ಪೂರ್ಣ ಮಾಡದ ಕೆಲಸಗಳನ್ನು ಪೂರ್ಣ ಮಾಡಲು ಹಣ ಬಿಡುಗಡೆ ಮಾಡಿದ್ದೇನೆ. ಅಭಿವೃದ್ಧಿ ಸಂಬಂಧ ಶಾಸಕರ ಜೊತೆ ಸಭೆ ಕರೆಯಲಾಗಿತ್ತು, ಸಿಎಂ ನೇತೃತ್ವದಲ್ಲಿಯೇ ನಡೆದ ಸಭೆಯಲ್ಲಿ ಈ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದೆ. ಆದರೆ ನನ್ನ ಮೇಲೆ ಆರೋಪ ಮಾಡಲಾಗಿದೆ. ನಾವು ಶಾಸಕರ ಮನಸ್ಸಿಗೆ ನೋವುಂಟು ಮಾಡಿಲ್ಲ, ಒಂದೊಮ್ಮೆ ತಿಳಿಯದೆ ಮಾಡಿದ್ದರೆ ಕ್ಷಮೆಯಾಚನೆ ಮಾಡಲಿದ್ದೇವೆ ಎಂದರು.
ನನ್ನ ಕ್ಷೇತ್ರದಲ್ಲಿ ನಡೆಯಬೇಕಾದ ವರ್ಗಾವಣೆಗಳ ಸಂಬಂಧ ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದು, ಇದುವರೆಗೂ ಬೇರೆ ಯಾವುದೇ ಇಲಾಖೆಯಲ್ಲೂ ವರ್ಗಾವಣೆ ಮಾಡಲು ಕೈ ಹಾಕಿಲ್ಲ. ನಾನು ಯಾವುದೇ ಇಲಾಖೆಯಲ್ಲಿ ಮಧ್ಯ ಪ್ರವೇಶ ಮಾಡಿಲ್ಲ, ಶಾಸಕರ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ ಎಂದರು.
ಮಾಧ್ಯಮಗಳು ನನ್ನನ್ನು ‘ಸೂಪರ್ ಸಿಎಂ’ ಎಂದು ಕರೆಯುತ್ತಾರೆ. ಅದನ್ನು ನಿಮ್ಮ ಆಶೀರ್ವಾದ ಎಂದು ಹೇಳಿ ಸುಮ್ಮನೆ ಆಗಿದ್ದೇನೆ. ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದ್ದು, ಒಬ್ಬರನ್ನು ಕರೆತಂದು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದೆ. ಆ ರಾಜ್ಯಸಭಾ ಸದಸ್ಯನನ್ನು ದೇವಿ ನೋಡಿಕೊಳ್ಳುತ್ತಾರೆ. ತಾಯಿ ಸನ್ನಿಧಿಯಲ್ಲಿ ಏನು ನಡೆದಿದೆ ಎಂದು ಗೊತ್ತು ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದರು.
ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆಗೂ ನನಗೂ ಸಂಬಂಧವಿಲ್ಲ. ನಾಳೆ ಏನಾಗುತ್ತೆ ಎಂಬುವುದನ್ನು ಕಾದು ನೋಡೋಣ. ಈ ವಿಚಾರಗಳನ್ನು ಸಿಎಂ ಅವರು ನೋಡಿಕೊಳ್ಳುತ್ತಾರೆ. ನನಗೆ ನನ್ನ ಇಲಾಖೆಯದ್ದೇ ಜಾಸ್ತಿ ಕೆಲಸ ಆಗಿದ್ದು, ನೀಡಿರುವ ಪಿಡಬ್ಲೂಡಿ ಇಲಾಖೆ ನೋಡೋಕೊಳ್ಳವ ಕೆಲಸ ಮಾಡುತ್ತೇನೆ ಎಂದರು. ಅಲ್ಲದೇ ಸಿಎಂ, ರೇವಣ್ಣ ಅಸಮಾಧಾನ ಹೊಂದಿದ್ದಾರೆ ಎಂದು ಕೊಂಡರೆ ಅದು ನಿಮ್ಮ ತಪ್ಪು ಅಷ್ಟೇ. ದೇವೇಗೌಡರು ಇರುವವರೆಗೂ ಇದು ಆಗಲ್ಲ. ನನಗೆ ಸಿಎಂ, ಡಿಸಿಎಂ ಪೋಸ್ಟ್ ಮೇಲೆ ಕಣ್ಣಿಲ್ಲ ಎಂದರು.