ಬೆಂಗಳೂರು: ಖ್ಯಾತ ಕೃಷಿ ತಜ್ಞ ಡಾ.ಸ್ವಾಮಿನಾಥನ್ ಅವರ ಜೊತೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದ್ದು, ಕೃಷಿ ಪದ್ಧತಿ ಬದಲಾವಣೆ ಕುರಿತು ಸಲಹೆ ಪಡೆದಿದ್ದಾರೆ.
ಸಭೆ ಬಳಿಕ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಹೊಸ ಕೃಷಿ ಪದ್ಧತಿ ಅಳವಡಿಕೆಗೆ ಸ್ವಾಮಿನಾಥನ್ ಅವರಿಂದ ಸಲಹೆ ಪಡೆದಿರುವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೊಸ ಪದ್ಧತಿ ಜಾರಿಗೆ ತರಲಾಗುವುದು. ಈ ಕುರಿತು ಇನ್ನು ಎರಡು ವಾರಗಳಲ್ಲಿ ಎಲ್ಲಾ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ, ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.
ಇಸ್ರೇಲ್ ಕೃಷಿ ಮಾದರಿಗೆ ಸ್ವಾಮಿನಾಥನ್ ಅವರು ಬೆಂಬಲ ಸೂಚಿಸಿದ್ದಾರೆ. ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಹಲವು ಮಾರ್ಪಾಡು ಮಾಡಲಾಗುತ್ತದೆ. ಇಸ್ರೇಲ್ ಮಾತ್ರವಲ್ಲ ಬೇರೆ ರಾಜ್ಯದ ಕೃಷಿ ಪದ್ಧತಿ ಜೊತೆಗೆ ಯಾರಾದರು ಉತ್ತಮ ಸಲಹೆ ಕೊಟ್ಟರೆ ಅದನ್ನು ಕೃಷಿಗೆ ಅಳವಡಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ತೋಟಗಾರಿಕೆ ಸಚಿವ ಮನುಗುಳಿ ಭಾಗವಹಿಸಿದ್ದರು.