ಮಂಡ್ಯ: ನಾನು ಮಾಡಿದ್ದ ಸಾಲ ಮನ್ನಾ ಸರಿಯಿಲ್ಲ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಅಲ್ಲದೆ ಇದೇ ವೇಳೆ ಸಂಸದೆ ಸುಮಲತಾ ಅವರಿಗೂ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಹೆಚ್ಡಿಕೆ, ಕೆಆರ್ ಪೇಟೆ ತಾಲೂಕಿಗೆ 22 ಸಾವಿರ ಕುಟುಂಬಗಳ ಸಾಲ ಮನ್ನಾ ಆಗಿದೆ. ಹೀಗಾಗಿ ನನ್ನನ್ನು ಟೀಕೆ ಮಾಡುವವರಿಗೆ ಯೋಗ್ಯತೆ ಇದೆಯಾ ಎಂದು ಕೇಳಬೇಕಾಗುತ್ತದೆ. 22 ಸಾವಿರ ರೈತ ಕುಟುಂಬಗಳಿಗೆ ಸರ್ಕಾರಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮನ್ನಾ ಆಗಿದೆ. ಈ ಬಗ್ಗೆ ದಾಖಲೆಗಳನ್ನು ಕೊಡುತ್ತೇನೆ ಎಂದರು.
ನಾನು 14 ತಿಂಗಳಲ್ಲಿ ಮಾಡಿರೋ ಕೆಲಸವನ್ನ ಇತಿಹಾಸದಲ್ಲಿ ಯಾರೂ ಮಾಡಿಲ್ಲ. ಪಾಪ ಮೊನ್ನೆ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಾ ಅವರು ಮಾಡಿದ್ದ ಸಾಲಮನ್ನಾ ಚೆನ್ನಾಗಿತ್ತಂತೆ, ನಾನು ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದಾರೆ. ಒಂದೊಂದು ತಾಲೂಕಿನಲ್ಲಿ ಎಷ್ಟು ಮನ್ನಾ ಆಗಿದೆ, ಎಷ್ಟು ಜನರಿಗೆ ಅನುಕೂಲವಾಗಿದೆ. ಪ್ರತೀ ತಾಲೂಕಿನದ್ದೂ ಒಂದೊಂದು ಪುಸ್ತಕ ರೆಡಿ ಮಾಡಿದ್ದೇನೆ. ಹಾಗೆಯೇ ಪ್ರತೀ ಹಳ್ಳಿಗಳಿಗೂ ಕಳುಹಿಸುವ 14 ತಿಂಗಳಲ್ಲಿ ಏನು ಮಾಡಿದ್ದೇನೆ ಎಂಬುದನ್ನು ತೋರಿಸಿಕೊಡುತ್ತೇನೆ ಎಂದರು.
ಇದೇ ವೇಳೆ ಮಂಡ್ಯ ಜಿಲ್ಲೆಯ ಜನ ಸ್ವಾಭಿಮಾನಿಯನ್ನು ಉಳಿಸಿದವರು ಇನ್ನೂ ಕಬ್ಬು ಮಾರಾಟ ಮಾಡಿಲ್ಲ. ಕೆಲವು ಕಡೆ 15 ತಿಂಗಳೋ, 16 ತಿಂಗಳೋ ಅವಧಿ ಮೀರಿ ಹೋಗಿದೆ. ಅದರ ಬಗ್ಗೆ ಯಾರಾದರೂ ಚಿಂತೆ ಮಾಡುತ್ತಾರಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಹೇಳಿದ್ದೇನು?
ಮಂಗಳವಾರ ಹುಬ್ಬಳ್ಳಿಗೆ ಭೇಟಿ ನೀಡಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮದು ಇನ್ನೂ ಸಾಲ ಮನ್ನಾ ಆಗಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದ ರೈತರನ್ನು ಸಮಾಧಾನ ಮಾಡಿದ್ದರು. ಬಳಿಕ ನಾನು ಮಾಡಿದ್ದು ಸಾಲಮನ್ನಾ ಸರಿಯಾಗಿದೆ. ಕುಮಾರಸ್ವಾಮಿ ಮಾಡಿರೋದು ಸರಿಯಾಗಿಲ್ಲ ಎಂದು ಹೇಳಿದ್ದರು.