ಬೆಂಗಳೂರು: ಸಂಸದೆ ಸುಮಲತಾ ಅವರು ಬಿಜೆಪಿಯಲ್ಲಿ ಮುಂದುವರಿಯೋದಾದ್ರೆ, ಬಿಜೆಪಿ ಪರವಾಗಿದ್ದರೆ ಅವರನ್ನು ಭೇಟಿಯಾಗಿ ಲೋಕಸಭಾ ಚುನಾವಣೆ (Lok Sabha Elections) ಸಿದ್ಧತೆಗಳ ಕುರಿತು ಮಾತುಕತೆ ನಡೆಸುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.
ಸುಮಲತಾರ ಆಪ್ತ ಸಚ್ಚಿದಾನಂದ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸುಮಲತಾರನ್ನೂ (Sumalatha Ambareesh) ಭೇಟಿ ಆಗ್ತೀವಿ. ಅವರು ಬಿಜೆಪಿಯಲ್ಲಿ (BJP) ಮುಂದುವರಿಯೋದಾದ್ರೆ, ಬಿಜೆಪಿ ಪರವಾಗಿದ್ದರೆ ಅವರನ್ನು ಭೇಟಿ ಮಾಡ್ತೀವಿ. ನಾವೇನು ಇಂತಹ ಕ್ಷೇತ್ರದಿಂದಲೇ ನಿಲ್ತೀವಿ ಅಂತ ಹೇಳಿಲ್ಲ. ಮತ್ತೊಬ್ಬರಿಗೆ ತೊಂದ್ರೆ ಕೊಟ್ಟು ನಿಲ್ಲಬೇಕೂ ಅಂತಲೂ ಇಲ್ಲ. ಯಾವುದು ಸಹ ಇನ್ನೂ ಚರ್ಚೆಯಾಗಿಲ್ಲ. ಪ್ರಾರಂಭಿಕ ಹಂತದ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿ-ಜೆಡಿಎಸ್ನವರು ಸೌಹಾರ್ದಯುತವಾಗಿ ಕೆಲಸ ಮಾಡೋದಕ್ಕೆ ಎಲ್ಲರ ಜೊತೆಗೂ ಮಾತುಕತೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ದೇವೇಗೌಡರು ಶತ್ರುಗಳಿಗೂ ಶಾಪ ಹಾಕಿಲ್ಲ: ಇನ್ನೂ ದೇವೇಗೌಡರ ವಿರುದ್ಧ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ದೇವೇಗೌಡರ ಬಗ್ಗೆ ಮಾತಾಡೋರು ಏನೇನು ಮಾಡಿದ್ದಾರೆ ಅಂತ ನೋಡಿಕೊಂಡು ಬಂದಿದ್ದೇನೆ. ಜೆಡಿಎಸ್ ಮುಗಿಸಬೇಕು ಅನ್ನೋದೇ ಅವರ ಅಜೆಂಡಾ. ಕ್ಷೇತ್ರದ ಕೆಲಸಕ್ಕೆ ಹೋದರೂ ಜೆಡಿಎಸ್ ಬಿಟ್ಟು ಕಾಂಗ್ರೆಸ್ಗೆ ಬನ್ನಿ ಏನ್ ಬೇಕೋ ಅದನ್ನ ಮಾಡಿಕೊಡ್ತೀನಿ ಅಂತಾರೆ. ಎಷ್ಟು ಕೋಟಿ ಬೇಕೋ ಅಷ್ಟು ಕೊಡ್ತೀವಿ ಪಕ್ಷಕ್ಕೆ ಬನ್ನಿ ಅಂತಾರೆ. ಯಾವ ಕಾರಣಕ್ಕೆ ಇದನ್ನ ಮಾಡ್ತಿದ್ದಾರೆ? ಜೆಡಿಎಸ್ ಮುಗಿಸಬೇಕು ಅಂತ ಮಾಡ್ತಿದ್ದಾರಾ? ಯಾವ ಪಕ್ಷದಿಂದ ಬೆಳೆದುಕೊಂಡು ಬಂದ್ರಿ, ಯಾರ ನಾಯಕತ್ವದಲ್ಲಿ ಈ ಹಂತಕ್ಕೆ ಬಂದಿದ್ದೀರಿ? ಯಾವುದಕ್ಕೂ ನಿಮ್ಮ ಪ್ರತಿಕ್ರಿಯೆ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ದೇವೇಗೌಡರು ಶತ್ರುಗಳಿಗೂ ಶಾಪ ಹಾಕಿಲ್ಲ. ಅವರು ಈಗ ರಾಜ್ಯದಲ್ಲಿ ನಡೆಯುತ್ತಿರೋ ದಬ್ಬಾಳಿಕೆ, ಅಕ್ರಮಗಳಿಂದ ಜನರೇ ಅವರನ್ನು ಸಮಾಪ್ತಿ ಮಾಡ್ತಾರೆ ಅಂತ ಹೇಳಿದ್ದಾರೆ. ಡಿಕೆಶಿ 135 ವರ್ಷದ ಪಕ್ಷ ಅಂತಾರೆ. ಗಾಂಧೀಜಿ ಇದ್ದಾಗ ಇತಿಹಾಸ ಬೇರೆ. ಈಗ ಇವರ ಇತಿಹಾಸ ಏನು? ಸ್ವಾತಂತ್ರ್ಯ ತರೋವಾಗ ಇತಿಹಾಸ ಬೇರೆ ಇತ್ತು. ಮನೆ ಆಸ್ತಿ ಮಾರಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಇವರು ಮಾಡ್ತಿರೋದು ಏನು? ಈಸ್ಟ್ ಇಂಡಿಯಾ ಕಂಪನಿ ಮಾಡಿದ ದರೋಡೆ ಇವರು ಮುಂದುವರಿಸಿಕೊಂಡು ಹೋಗ್ತಿದ್ದಾರೆ. ಬೇಕಾದಷ್ಟು ಉದಾಹರಣೆ ಮುಂದಿಡಬಹುದು ಅಂತ ಕಿಡಿಕಾರಿದ್ದಾರೆ.