ಬೆಂಗಳೂರು: ಮುಧೋಳದಲ್ಲಿ (Mudhol) ಕಬ್ಬು ತುಂಬಿದ್ದ ಟ್ರ್ಯಾಕ್ಟರುಗಳು ಬೆಂಕಿಗೆ ಆಹುತಿಯಾಗಿರುವ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D Kumaraswamy) ಅವರು ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಬಿಕ್ಕಟ್ಟನ್ನು ತಿಳಿಗೊಳಿಸಬೇಕು. ಕಬ್ಬು ಬೆಳೆಗಾರರ ಸಂಕಷ್ಟ ಮತ್ತೆ ಸೃಷ್ಟಿಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕಬ್ಬು ಬೆಳೆಗಾರರ ಸಂಕಷ್ಟ ಬಿಗಡಾಯಿಸಿದೆ. ಮುಧೋಳದ ಸಕ್ಕರೆ ಕಾರ್ಖಾನೆಯ ಯಾರ್ಡ್ʼನಲ್ಲಿ ನಿಂತಿದ್ದ ಕಬ್ಬು ತುಂಬಿದ್ದ ಟ್ರಾಕ್ಟರುಗಳು ಬೆಂಕಿಗೆ ಆಹುತಿ ಆಗಿರುವುದು ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಕಾಂಗ್ರೆಸ್ (Congress) ಸರ್ಕಾರದ ವೈಫಲ್ಯಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಟೀಕಿಸಿದರು. ಇದನ್ನೂ ಓದಿ: ಮುಧೋಳ | ಭುಗಿಲೆದ್ದ ರೈತರ ಆಕ್ರೋಶ – 50ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳಿಗೆ ಬೆಂಕಿ, ಸಾವಿರಾರು ಟನ್ ಕಬ್ಬು ಭಸ್ಮ!
ಬೆಳಗಾವಿಯಲ್ಲಿ ರೈತರು ಹೋರಾಟಕ್ಕಿಳಿದಾಗ ಆ ಕ್ಷಣಕ್ಕೇನೋ ಅವರ ಮೂಗಿಗೆ ತುಪ್ಪ ಸವರಿದ ಸರ್ಕಾರ, ಇಡೀ ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಘೋರ ವೈಫಲ್ಯ ಕಂಡಿತು. ಅದರ ಪರಿಣಾಮವೇ ಮುಧೋಳದಲ್ಲಿ ರೈತರ ತಾಳ್ಮೆಯ ಕಟ್ಟೆಯೊಡೆಯುಂತೆ ಮಾಡಿದೆ ಎಂದು ದೂರಿದ್ದಾರೆ.
ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಅನ್ನುವ ಲಾಭಕೋರ ಧೋರಣೆಯನ್ನು ಸರ್ಕಾರ ಬಿಡಬೇಕು. ರೈತರ ಸಂಕಷ್ಟವನ್ನು ಅಧಿಕಾರದ ಅಮುಲುಗಣ್ಣಿನಿಂದ ನೋಡಬಾರದು. ಹೃದಯ ವೈಶಾಲ್ಯದಿಂದ ಕಾಣುವ ಔದಾರ್ಯ ತೋರಬೇಕು. ಮುಧೋಳದ ರೈತರ ಜತೆ ನಾನೂ ಇದ್ದೇನೆ ಎಂದು ಸಚಿವರು ಕಬ್ಬು ಬೆಳೆಗಾರರಿಗೆ ಧೈರ್ಯ ತುಂಬಿದ್ದಾರೆ. ಇದನ್ನೂ ಓದಿ: 3,500 ರೂ. ಬೇಕೇ ಬೇಕು – ಮುಧೋಳದಲ್ಲಿ ಉಗ್ರ ಸ್ವರೂಪ ಪಡೆದ ರೈತರ ಹೋರಾಟ


