ಬೆಂಗಳೂರು: ರಾಜ್ಯದಲ್ಲಿ 2018-19ನೇ ಸಾಲಿನಲ್ಲಿ ವಿದ್ಯುತ್ ಪ್ರಸರಣ ಜಾಲವನ್ನು ಬಲವರ್ಧನೆಗೊಳಿಸಲು 35 ವಿದ್ಯುತ್ ಉಪಕೇಂದ್ರಗಳನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಮೂಲಕ ಸ್ಥಾಪಿಸಲಾಗುವುದು. 75 ಉಪಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು.
ಬೆಂಗಳೂರು ನಗರದಲ್ಲಿ ಎಲ್ಲಾ ಓವರ್ಹೆಡ್ ಮಾರ್ಗಗಳನ್ನು ಭೂಗತ ಮಾರ್ಗ ಪರಿವರ್ತಿಸಲು ವಿಸ್ತøತ ಯೋಜನೆಯನ್ನು ತಯಾರಿಸಿ ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವುದು.
ವಸತಿ:
ಈ ಹಿಂದೆ ಬೆಂಗಳೂರು ನಗರದ ಬಡವರಿಗೆ ವಸತಿ ಸೌಲಭ್ಯ ಒದಗಿಸಲು `ಮುಖ್ಯಮಂತ್ರಿ ಒಂದು ಲಕ್ಷ ಮನೆಗಳು’ ಎಂಬ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇದನ್ನು ಮುಂದಿನ ವರ್ಷಗಳಲ್ಲಿ ಎಲ್ಲಾ ನಗರಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ.
ಬೆಂಗಳೂರು ನಗರದಲ್ಲಿ ಬಡವರಿಗೆ ಮನೆಗಳನ್ನು ಒದಗಿಸುವಲ್ಲಿ ಇರುವ ತೊಂದರೆಗಳನ್ನು ನಿವಾರಿಸಲು ಆಯ್ದ ಸ್ಥಳಗಳಲ್ಲಿ ಬಹುಮಹಡಿ ಮನೆಗಳನ್ನು(ನೆಲಮಹಡಿ+14) ನಿರ್ಮಿಸಲು ನಮ್ಮ ಸರ್ಕಾರವು ಉದ್ದೇಶಿಸಿದೆ.
ರಾಜ್ಯದ ಕೊಳಗೇರಿಗಳಲ್ಲಿರುವ ಜನಸಂಖ್ಯೆ 40 ಲಕ್ಷಕ್ಕೂ ಅಧಿಕವಾಗಿದೆಯೆಂದು ಅಂದಾಜಿಸಲಾಗಿದೆ. ಕೊಳಗೇರಿ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸುವ ಹಕ್ಕನ್ನು ವರ್ಗಾಯಿಸುವ (ಟಿಡಿಆರ್) ಬದಲಿಗೆ ಹೆಚ್ಚುವರಿ ನೆಲಗಟ್ಟು ಪ್ರದೇಶದ ಅನುಪಾತ (ಎಫ್ಎಆರ್) ಒದಗಿಸುವುದರ ಮೂಲಕ ಅವುಗಳನ್ನು ನಗರಪಾಲಿಕೆಗಳ ಪ್ರದೇಶಗಳಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ವಿಸ್ತøತವಾದ ಮಾರ್ಗಸೂಚಿಯನ್ನು 2019-20 ರಿಂದ ಜಾರಿಗೆ ತರಲಾಗುವುದು.
ಹಿಂದಿನ ಸರ್ಕಾರದ ಅವಧಿಯಲ್ಲಿ ಸುಮಾರು 14 ಲಕ್ಷ ಮನೆಗಳು ನಿರ್ಮಾಣವಾಗಿರುತ್ತದೆ. ನಮ್ಮ ಮೈತ್ರಿ ಸರ್ಕಾರವು ಇನ್ನಷ್ಟು ಉತ್ಸಾಹದಿಂದ ವಸತಿ ಯೋಜನೆಯನ್ನು ಮುಂದುವರೆಸಲು ಉದ್ದೇಶಿಸಿದ್ದು, ಬೇಡಿಕೆಗೆ ಅನುಗುಣವಾಗಿ ಮನೆಗಳ ನಿರ್ಮಾಣವನ್ನು ಮಾಡಲು ಸಂಕಲ್ಪ ತೊಟ್ಟಿದೆ.
ಪ್ರಸ್ತುತ ವಸತಿ ಯೋಜನೆಗಳಲ್ಲಿ ವಿಕಲಚೇತನ ಫಲಾನುಭವಿಗಳಿಗೆ `ಬೇಡಿಕೆಯ ಮೇರೆಗೆ’ ಆನ್ಲೈನ್ನಲ್ಲಿ ಅರ್ಜಿಗಳನ್ನು ಪಡೆದು ಮನೆ ಹಂಚಿಕೆ ಮಾಡಲು ಉದ್ದೇಶಿಸಿದೆ.