-ಬಿಡುಗಡೆ ಆಗಿದೆ ಕೋಟಿ ಕೋಟಿ ಅನುದಾನ
ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆ ಆದಾಗಿನಿಂದಲೂ ಇದು ಕೇವಲ ಮೂರು ಜಿಲ್ಲೆಗೆ ಸೀಮಿತ ಎಂದು ವಿಪಕ್ಷ ನಾಯಕರು ಆರೋಪಿಸುತ್ತಾ ಬಂದಿದ್ದಾರೆ. ಅಧಿಕಾರ ವಹಿಸಿಕೊಂಡ ಸಿಎಂ ಮೊದಲ ಬಾರಿಗೆ ಮಂಡಿಸಿದ್ದ ಬಜೆಟ್ ಕೇವಲ ಮೂರು ಜಿಲ್ಲೆಗೆ ಸೀಮಿತವಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಮೈತ್ರಿ ಸರ್ಕಾರ ರಚನೆಯಾಗಿ ಅರ್ಧ ವರ್ಷ ಕಳೆದಿದೆ. ಇದೂವರೆಗೂ ಹಾಸನ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ಮೀಸಲಾಗಿದೆ.
ಸಮ್ಮಿಶ್ರ ಸರ್ಕಾರ ರಚನೆಯ ಸೂತ್ರದಾರ ಮತ್ತು ರಕ್ಷಕರಾಗಿರುವ ಸಚಿವ ಡಿ.ಕೆ.ಶಿವಕುಮಾರ್ ಅವರ ಕನಕಪುರ ಕ್ಷೇತ್ರಕ್ಕೂ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ರಾಮನಗರದಲ್ಲಿ ಎಂಜಿನಿಯರ್ ಗಳ ವಸತಿ ಗೃಹ ನಿರ್ಮಾಣಕ್ಕೆ 15 ಕೋಟಿ, ಪರಿವೀಕ್ಷಣ ಕಟ್ಟಡ, ಡಿ ಗ್ರೂಪ್ ನೌಕರರ ಕಟ್ಟಡ ನಿರ್ಮಾಣಕ್ಕೆ 10 ಕೋಟಿ, ಸರ್ಕಾರಿ ಕಾಲೇಜುಗಳ ಮೂಲಭೂತ ಸೌಕರ್ಯ, ಕಟ್ಟಡ ಅಭಿವೃದ್ಧಿ ಕಾಮಗಾರಿಗೆ 25-40 ಕೋಟಿ, ಕನಕಪುರದಲ್ಲಿ ವಿವಿಧ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ 20 ರಿಂದ 30 ಕೋಟಿ ಮತ್ತು ಕನಕಪುರ ತಾಲೂಕು ಅತಿಥಿ ಗೃಹ ನಿರ್ಮಾಣ ಕಾಮಗಾರಿಗೆ 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ರಾಮನಗರ ಜಿಲ್ಲೆಗೆ ಸುಮಾರು 100 ರಿಂದ 150 ಕೋಟಿ ಕೆಲಸಗಳನ್ನು ಯಾವುದೇ ಟೆಂಡರ್ ಇಲ್ಲದೆ ತಮಗೆ ಬೇಕಾದ ಗುತ್ತಿಗೆದಾರರಿಗೆ ಸಿಎಂ ನೀಡಿದ್ದಾರೆ. ಹಂಪಿ ಉತ್ಸವ ಮಾಡಲು ಹಣ ಇಲ್ಲವೆಂದು ಹೇಳುವ ಸರ್ಕಾರ ರಾಮನಗರಕ್ಕೆ ಕೋಟ್ಯಂತರ ಅನುದಾನ ಬಿಡುಗಡೆ ಮಾಡುತ್ತಿದೆ. ಈ ಸರ್ಕಾರ ಕೇವಲ ಮೂರು ಜಿಲ್ಲೆಗಳಿಗೆ ಸೀಮಿತ ಅನ್ನೋದಕ್ಕೆ ಇದಕ್ಕಿಂತ ಬೇರೆ ಸಾಕ್ಷ ನಮಗೆ ಬೇಕಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ, ಮರಿಲಿಂಗೇಗೌಡ ಮಾಲೀಪಾಟೀಲ್ ಹೇಳುತ್ತಾರೆ.
ಈ ಎಲ್ಲ ಕಾಮಗಾರಿಗಳಿಗೂ ಯಾವುದೇ ಟೆಂಡರ್ ಕರೆಯದೇ ಗುತ್ತಿಗೆಯನ್ನು ನೀಡಲಾಗಿದೆ. ತುರ್ತು ಸಮಯದ ವಿನಾಯ್ತಿಯನ್ನ ಸರ್ಕಾರ ಎಲ್ಲ ಕಾಮಗಾರಿಗಳಿಗೆ ಅಳವಡಿಸಿಕೊಂಡಿದ್ದು, 4ಜಿ ಅಡಿಯಲ್ಲಿ ಎಲ್ಲಾ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆಗೆ ಅದೇಶ ನೀಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv