– ವಕೀಲರ ಆಹೋರಾತ್ರಿ ಧರಣಿಗೆ ಅಶೋಕ್, ಹೆಚ್ಡಿಕೆ ಸಾಥ್
– ರಾಮನಗರದಲ್ಲಿ ಮುಂದುವರಿದ ಪೊಲೀಸರು-ವಕೀಲರ ಜಟಾಪಟಿ
ರಾಮನಗರ: ರಾಮನಗರದಲ್ಲಿ ಪೋಲಿಸರು-ವಕೀಲರ ನಡುವಿನ ಸಂಘರ್ಷ ಮುಂದುವರಿದಿದೆ. 40 ವಕೀಲರ ಮೇಲೆ ಎಫ್ಐಆರ್ ಖಂಡಿಸಿ ಕಳೆದೊಂದು ವಾರದಿಂದ ವಕೀಲ ಸಂಘ ಮಾಡ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.
ಸೋಮವಾರ ರಾಮನಗರದಲ್ಲಿ ನಡೆಯುತ್ತಿರುವ ವಕೀಲರ ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಪ್ರಮುಖ ನಾಯಕರು ಭೇಟಿ ನೀಡಿದ್ದಾರೆ. ಈ ವೇಳೆ ವಕೀಲರ ಸಮಸ್ಯೆ ಆಲಿಸಿದ ಹೆಚ್ಡಿಕೆ ಈ ವಿಚಾರದಲ್ಲಿ ಕೇವಲ ಪಿಎಸ್ಐ ಮಾತ್ರವಲ್ಲ, ಎಸ್ಪಿಯನ್ನೇ ಸಸ್ಪೆಂಡ್ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.
ಯಾರೋ ರಫೀಕ್ ಎಂಬಾತ ವಕೀಲರ ಮೇಲೆ ದೂರು ನೀಡಿದ್ದಾನೆ. ಯಾರೋ ಪ್ರಗತಿಪರರು ವಕೀಲರ ಸಂಘದಲ್ಲಿ ಹೋಗಿ ಗಲಾಟೆ ಆಗಿದೆ ಅಂದರು. ಎಷ್ಟು ಜನ ಪ್ರಗತಿಪರರಿಗೆ ಗಾಯ ಆಗಿದೆ? ಎಷ್ಟು ಜನ ಆಸ್ಪತ್ರೆಗೆ ಸೇರಿದ್ದಾರೆ? ಇಲ್ಲಿ ಸ್ಥಳೀಯ ಶಾಸಕ, ಜಿಲ್ಲಾ ಮಂತ್ರಿ ಆಡಳಿತ ಮಾಡ್ತಿದ್ದೀರಾ ಅಥವಾ ಪ್ರಗತಿಪರರು ಆಡಳಿತ ಮಾಡ್ತಿದ್ದೀರಾ.? ನ್ಯಾಯಾಲಯದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದಿದ್ದಿದ್ದು ಒಬ್ಬ ಮುಸ್ಲಿಂ, ದೂರು ಕೊಟ್ಟಿದ್ದು ಮುಸ್ಲಿಂ, ಸ್ಥಳೀಯ ಶಾಸಕ ಮುಸ್ಲಿಂ, ಇಲ್ಲಿನ ಪಿಎಸ್ಐ ಸಹ ಮುಸ್ಲಿಂ, ಅಲ್ಲಿ ಏನು ನಡೆಯುತ್ತಿದೆ ಅಂತ ಗೊತ್ತಾಗ್ತಿದೆ. ವಕೀಲರ ಆವರಣಕ್ಕೆ ಹೋಗಲು ಇವರಿಗೆ ಅನುಮತಿ ಕೊಟ್ಟಿದ್ದು ಯಾರು? ವಕೀಲ ಸಂಘಕ್ಕೆ ಮನವಿ ಕೊಡಲು ಡಿಸ್ಟ್ರಿಕ್ಟ್ ಜಡ್ಜ್ ಅನುಮತಿ ಕೊಡಬೇಕು, ಕೊಟ್ಟಿದ್ದಾರಾ? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
ಚಾನ್ ಪಾಷಾ ಎಂಬ ವ್ಯಕ್ತಿ ನ್ಯಾಯಾಂಗ ನಿಂದನೆ ಪೋಸ್ಟ್ ಹಾಕಿದ್ದ. ಆತನ ಮೇಲೆ ಯಾವ ಸೆಕ್ಷನ್ ಹಾಕಿದ್ರಿ? ಆತನ ಪರವಾಗಿ ವಕೀಲರ ಸಂಘಕ್ಕೆ ರಫೀಕ್ ಹಾಗೂ ಪ್ರಗತಿಪರರು ಹೋಗಿದ್ದಾರೆ. ಇದರಲ್ಲಿ ಸ್ಥಳೀಯ ಶಾಸಕನ ಕೈವಾಡ ಏನು ಎಂಬುದು ನನಗೆ ಗೊತ್ತು? ಬೆಂಗಳೂರಿನಿಂದ ಯಾವನು ಡೈರೆಕ್ಷನ್ ಕೊಟ್ಟ ಅಂತ ಗೊತ್ತು. ಈ ಘಟನೆಯನ್ನ ಮುಚ್ಚಿಹಾಕಿಸುವ ಹುನ್ನಾರ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.