ಬೆಂಗಳೂರು: ಜೀವನದಲ್ಲಿ ಒಂದೊಂದು ಸೋಲು ಒಂದೊಂದು ಪಾಠವನ್ನು ಕಲಿಸುತ್ತೆ. ಇಂತಹದ್ದೆ ಪಾಠವನ್ನ ಮಾಜಿ ಸಿಎಂ ಕುಮಾರಸ್ವಾಮಿ ಅವ್ರಿಗೂ ಚುನಾವಣೆ ಸೋಲು ಕಲಿಸಿದೆ. ಚುನಾವಣೆ ಸೋಲಿನ ಬಳಿಕ ರಾಜಕೀಯದಿಂದ ದೂರವೇ ಇರುವ ಕುಮಾರಸ್ವಾಮಿ ಹೊಸ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಸದ್ಯಕ್ಕಂತು ರಾಜಕೀಯವಾಗಿ ಮಾಡಲು ಏನು ಕೆಲಸವಿಲ್ಲ. ಹೀಗಾಗಿ ಹೆಚ್ಚು ಸಮಯ ಕುಮಾರಸ್ವಾಮಿ ಅವರಿಗೆ ಸಿಗುತ್ತಿದೆಯಂತೆ. ಈ ಸಮಯವನ್ನ ಪುಸ್ತಕ ಓದೋಕೆ ಕಳೆಯುತ್ತಿದ್ದಾರಂತೆ ಮಾಜಿ ಸಿಎಂ ಕುಮಾರಸ್ವಾಮಿ.
ಪುಸ್ತಕ ಓದೋ ಹವ್ಯಾಸ ಪ್ರಾರಂಭ ಮಾಡಿಕೊಂಡಿರೋ ಬಗ್ಗೆ ಸ್ವತಃ ಕುಮಾರಸ್ವಾಮಿ ಅವ್ರೇ ಹೇಳಿದ್ದಾರೆ. ಇಂದು ಜೆಡಿಎಸ್ ಕಚೇರಿಯಲ್ಲಿ ಪೌರತ್ವ ಕಾಯ್ದೆ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ‘ಇಂಡಿಯಾ ಆಫ್ಟರ್ ಇಂಡಿಪೆಂಡೆನ್ಸ್’ ಪುಸ್ತಕವನ್ನು ಕುಮಾರಸ್ವಾಮಿ ತಮ್ಮ ಜೊತೆಗೆ ತಂದಿದ್ರು. ಪೌರತ್ವ ಕಾಯ್ದೆ ವೇಳೆ ವಿವರಣೆ ನೀಡುವಾಗ ಈ ಪುಸ್ತಕದ ಅಂಶಗಳನ್ನು ಸ್ವತಃ ಕುಮಾರಸ್ವಾಮಿ ಉಲ್ಲೇಖ ಮಾಡಿದ್ರು. ಸುದ್ದಿಗೋಷ್ಠಿ ಮಧ್ಯೆ ನಾನು ಪುಸ್ತಕ ಓದೋಕೆ ಪ್ರಾರಂಭ ಮಾಡಿದ್ದೇನೆ ಅಂತ ಎಚ್ಡಿಕೆ ಹೇಳಿದ್ರು.
ಈಗ ರಾಜಕೀಯವಾಗಿ ನನಗೇನು ಮಾಡೋಕೆ ಕೆಲಸ ಇಲ್ಲ. ಹೀಗಾಗಿ ಹೆಚ್ಚು ಸಮಯ ಸಿಗುತ್ತಿದೆ. ಈ ಸಮಯವನ್ನ ಇತಿಹಾಸ, ಜಗತ್ತು, ವಿಶೇಷ ಲೇಖನ ಸೇರಿದಂತೆ ಹೆಚ್ಚು ಹೆಚ್ಚು ಪುಸ್ತಕ ಓದಲು ಮೀಸಲಿಟ್ಟಿದ್ದೇನೆ ಅಂತ ಕುಮಾರಸ್ವಾಮಿ ತಿಳಿಸಿದ್ರು. ದಾಖಲೆಗಳನ್ನ ಹೆಕ್ಕಿ ತೆಗೆಯೋ ಚಾಲಕಿ ಕುಮಾರಸ್ವಾಮಿ ಅವ್ರಿಗೆ ಮೊದಲಿನಿಂದಲೂ ಇದೆ. ದಾಖಲೆಗಳ ಅಧ್ಯಯನ ಮಾಡೋದು ಕುಮಾರಸ್ವಾಮಿ ಅವ್ರಿಗೆ ಹೆಚ್ಚು ಆಸಕ್ತಿ. ಆದ್ರೆ ಈಗ ಸರ್ಕಾರದ ದಾಖಲೆಗಳನ್ನು ಬಿಟ್ಟು ಇತಿಹಾಸದ ಪುಸ್ತಕಗಳ ಅಧ್ಯಾಯನದ ಮೂಲಕ ಜ್ಞಾನಾರ್ಜನೆಗೆ ಕುಮಾರಸ್ವಾಮಿ ಮುಂದಾಗಿದ್ದಾರೆ.