ಬೆಂಗಳೂರು: ಮೈತ್ರಿ ಸರ್ಕಾರ ಪತನ ಬಳಿಕ 2ನೇ ಹಂತದ ಆಪರೇಷನ್ ಕಮಲ ನಡೆಸಲು ತೆರೆಮರೆಯಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂಬ ಸುದ್ದಿ ಈ ಹಿಂದೆಯೇ ಕೇಳಿ ಬಂದಿತ್ತು. ಸದ್ಯ ಜೆಡಿಎಸ್ ಪಕ್ಷದ ಶಾಸಕರು, ಪರಿಷತ್ ಸದಸ್ಯರು ಹಾಗೂ ಪಕ್ಷದ ವರಿಷ್ಠರ ನಡುವೆ ಉಂಟಾಗಿರುವ ಅಸಮಾಧಾನವನ್ನು ಶಮನ ಮಾಡಲು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ವಿಶೇಷ ಪ್ಲಾನ್ ಮಾಡಿದ್ದಾರೆ.
ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ಹಾಗೂ ಪರಿಷತ್ ಸದಸ್ಯರು, ಮುಖಂಡರು ಮಲೇಷಿಯಾ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಪ್ರವಾಸ ತೆರಳಲು ಬೇಕಾದ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ನ.3 ರಿಂದ ನ.6ವರೆಗೂ ಜೆಡಿಎಸ್ ಮುಖಂಡರು ಮಲೇಷಿಯಾ ಪ್ರವಾಸಕ್ಕೆ ತೆರಳಿದ್ದು, ಪಕ್ಷದಲ್ಲಿ ಒಗ್ಗಟ್ಟು ಸಾಧಿಸುವ ಉದ್ದೇಶ ಈ ಪ್ರವಾಸ ಹಿಂದಿದೆ ಎನ್ನಲಾಗಿದೆ. ಪ್ರವಾಸ ವೇಳೆ ಪಕ್ಷದ ನಾಯಕರ ಸಮಸ್ಯೆಗಳು ಹಾಗೂ ಅವರ ಅಸಮಾಧಾನಕ್ಕೆ ಕಾರಣಗಳನ್ನು ತಿಳಿದು ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ವರಿಷ್ಠರು ನೀಡಲಿದ್ದಾರೆ. ಸದ್ಯ ಎಚ್ಡಿಕೆಯವರ ಈ ನಿರ್ಧಾರಕ್ಕೆ ಕೆಲ ಅಪ್ತ ಶಾಸಕರು ಒಪ್ಪಿಗೆ ನೀಡಿದ್ದು, ಪಕ್ಷದ ನಾಯಕರ ಸಮಸ್ಯೆ ಕೇಳಲು ಈ ಪ್ರವಾಸ ಶಾಸಕರಿಗೆ ಹೊಸ ಅನುಭವ ಹಾಗೂ ಹೊಸತನ ನೀಡಲಿದೆ ಎಂಬುವುದು ಅವರ ಪ್ಲಾನ್ ಆಗಿದೆ.
ಎಚ್ಡಿಕೆರ ಪ್ಲಾನ್ ನಂತೆ ಪ್ರವಾಸ ತೆರಳುವ ಕುರಿತು ಇನ್ನು ಕೆಲ ನಾಯಕರು ನಿರ್ಧಾರ ತೆಗೆದುಕೊಳ್ಳಬೇಕಿದ್ದು, ನಾಳೆ ಬಸವರಾಜ್ ಹೊರಟ್ಟಿ ಅವರ ನೇತೃತ್ವದಲ್ಲಿ ಅಸಮಾಧಾನಿತ ನಾಯಕರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮಲೇಷಿಯಾ ಪ್ರವಾಸಕ್ಕೆ ತೆರಳುವ ಅಥವಾ ನಿರಾಕರಿಸುವ ಕುರಿತ ನಿರ್ಧಾರ ಅಂತಿಮವಾಗಲಿದೆ ಎಂಬ ಮಾಹಿತಿ ಲಭಿಸಿದೆ.
ಈಗಾಗಲೇ ಜೆಡಿಎಸ್ನ ಹಲವು ಶಾಸಕರು ಹಾಗೂ ಪರಿಷತ್ ನಾಯಕರು, ನಾಯಕರು ಜೆಡಿಎಸ್ ವರಿಷ್ಠರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದಾರೆ. ಆದರೆ ಎಚ್ಡಿಕೆಯವರ ಈ ಮಲೇಷಿಯಾ ಪ್ರವಾಸ ಪ್ಲಾನ್ ಯಾವ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.