ಮೈಸೂರು: ಇಂದಿನಿಂದ ರಾಜಕೀಯ ಅಖಾಡ ಶುರುವಾಗಿದ್ದು, ಅರಮನೆ ನಗರದಲ್ಲಿಯೇ ರಾಜಕೀಯ ಅಖಾಡ ಶುರು ಮಾಡೋಣ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲ್ ಹಾಕಿದ್ದಾರೆ.
ಮೈಸೂರಿನಲ್ಲಿ ಹತ್ತು ಜನಗಳ ಗರಡಿ ಉದ್ಘಾಟಿಸಿ ಮಾತನಾಡಿದ ಅವರು, ಹಾಸನದಲ್ಲಿ ನಿಂತು ದೇವೆಗೌಡರಿಗೆ ವಯಸ್ಸಾಗಿದೆ ಎಂದು ಹೇಳಿದ್ದೀರಿ. ಬನ್ನಿ ಮೈಸೂರಿನಿಂದಲೇ ರಾಜಕೀಯ ಅಖಾಡ ಶುರು ಮಾಡೋಣ. ನಾನು ಗರಡಿ ಪೂಜೆ ಮಾಡಿದ ನಂತರವೇ ಚುನಾವಣೆಗೆ ಸ್ಪರ್ಧೆ ಮಾಡಿದ್ದು. ಇದೀಗ ಮತ್ತೆ ಗರಡಿ ಉದ್ಘಾಟನೆ ಮೂಲಕ ರಾಜಕೀಯ ಅಖಾಡ ಆರಂಭವಾಗಿದೆ. ಬನ್ನಿ ಇಲ್ಲಿಂದಲ್ಲೇ ರಾಜಕೀಯ ಅಖಾಡ ಶುರು ಮಾಡೋಣ ಎಂದು ಹೆಚ್.ಡಿ.ದೇವೇಗೌಡ ಖಡಕ್ ಹೇಳಿಕೆ ನೀಡಿದರು.
ನೀವು ಎಲ್ಲಿದ್ದೀರಿ, ಎಲ್ಲಿಂದ ಬಂದಿದ್ದೀರಿ ಅಂತಾ ನೆನಪು ಮಾಡಿಕೊಳ್ಳಿ. ದುರಹಂಕಾರ, ಅಧಿಕಾರದ ಮದದಲ್ಲಿ ಮಾತಾಡಬೇಡಿ. ಎಚ್.ಡಿ. ರೇವಣ್ಣರನ್ನ ಸೋಲಿಸಲು ನಿಮ್ಮ ಕೈಯಲ್ಲಿ ಸಾಧ್ಯವಿಲ್ಲ. ಯಡಿಯೂರಪ್ಪ ಜೈಲಿಗೆ ಹೋಗಲು ಕುಮಾರಸ್ವಾಮಿ ಕಾರಣವಾಗಿದ್ದಾರೆ. ಅವರ ಹಗರಣವನ್ನು ಬಯಲು ಮಾಡಲು ಹಗಲು ರಾತ್ರಿ ಕಷ್ಟ ಪಟ್ಟಿದ್ದಾರೆ. ನೀವು ವಿಪಕ್ಷ ನಾಯಕರಾಗಿ ಅರಾಮಾಗಿ ಕೂತಿದ್ದೀರಿ. ಈಗ ನಮ್ಮನ್ನು ಬಿಜೆಪಿ ಬಿಟೀಂ ಅನ್ನುತ್ತೀರಾ? ಎಂದು ಸಿಎಂ ವಿರುದ್ಧ ದೇವೇಗೌಡ ವಾಗ್ದಾಳಿ ಮಾಡಿದ್ರು.
ಮೈಸೂರು ಜಿಲ್ಲೆ ರಾಜಕಾರಣದ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಬನ್ನಿ ಸಿದ್ದರಾಮಯ್ಯ ಅಖಾಡಕ್ಕೆ ಇಳಿಯೋಣಾ, ನಾನು ಸಿದ್ಧನಾಗಿದ್ದೇನೆ, ನೋಡೋಣಾ ಬನ್ನಿ. ಹಾಸನದಲ್ಲಿ ಗೆಲ್ಲುತ್ತೀಯಾ, ನಾನು ಬದುಕಿದ್ದೇನೆ, ನೋಡುತ್ತೀನಿ ಅದು ಯಾವ ರೀತಿ ಗೆಲ್ಲುತ್ತೀಯಾ ಅಂತಾ. ನಿಮ್ಮ ಸೊಕ್ಕು ಮುರಿಯುವ ಶಕ್ತಿ, ಜೀವ ನನ್ನಲಿ ಇದೆ. ನನಗೆ 85 ವಯಸ್ಸಾಗಿದೆ. ಸಿದ್ದರಾಮಯ್ಯಗೆ 65 ಅಷ್ಟೇ ಏನೋ. ಆ ಪೈಲ್ವಾನ್ ಜೊತೆ ನಾನು ಕುಸ್ತಿ ಆಡೋಕೆ ಆಗೋಲ್ಲ. ಆದ್ರೆ ಅವರನ್ನು ಎದರಿಸಲು ನನ್ನ ಬಳಿ ಜನ ಇದ್ದಾರೆ. ಮೈಸೂರಿನಿಂದಲೇ ರಾಜಕೀಯ ಗರಡಿ ಆರಂಭಿಸುತ್ತೇನೆ ಎಂದು ಹೇಳಿದ್ರು.