ಬೆಂಗಳೂರು: ಪ್ರಾದೇಶಿಕ ಪಕ್ಷ ಜೆಡಿಎಸ್ನ ಬೆಂಗಳೂರು ಕಚೇರಿ ಇಂದು ಉದ್ಘಾಟನೆಯಾಗಿದೆ.
ಮುಂಜಾನೆ ಐದು ಗಂಟೆಗೆ ಗಣೇಶ್ ಹೋಮ, ಲಕ್ಷ್ಮೀಹೋಮ, ಗೋಪೂಜೆ ನಡೆದಿದ್ದು, ಕಚೇರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರವೇಶ ಮಾಡಿದ್ರು. ಜೆಡಿಎಸ್ ನೂತನ ಕಚೇರಿಯಲ್ಲಿ ಮಂಗಳವಾರದಿಂದಲೇ ಹೋಮ ಹವನ ಆರಂಭವಾಗಿದ್ದು, ಇಂದು ಮಾಜಿ ಪ್ರಧಾನಿ ದೇವೇಗೌಡರು ಅಧಿಕೃತವಾಗಿ ಪಕ್ಷದ ಕಚೇರಿಯನ್ನ ಉದ್ಘಾಟಿಸಿದ್ರು.
ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಸೇರಿದಂತೆ ಹಲವು ಮುಖಂಡರು ಜೆಡಿಎಸ್ ಕಚೇರಿಯ ಹೋಮದಲ್ಲಿ ಭಾಗವಹಿಸಿದ್ರು. ದೇವೇಗೌಡರು ಸಹ ಪಕ್ಷದ ನೂತನ ಕಚೇರಿಗೆ ಮಂಗಳವಾರ ಭೇಟಿ ನೀಡಿ ಹೋಮ ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಂಡಿದ್ರು.
ನೂತನ ಕಚೇರಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಜೆಡಿಎಸ್ಗೆ ಕಚೇರಿ ಕೊರತೆ ಇತ್ತು. ಪಕ್ಷದ ಚಟುವಟಿಕೆಗಳಿಗಾಗಿ ಪ್ರಧಾನ ಕಚೇರಿಯ ಅಗತ್ಯವಿತ್ತು. ಮುಂಬರುವ ಚುನಾವಣಾ ಸಿದ್ಧತೆಗಾಗಿ ಕಟ್ಟಡ ಬಳಸಿಕೊಳ್ಳಲಿದ್ದೇವೆ. ನಿನ್ನೆ ರಾತ್ರಿಯಿಂದ ಪೂಜಾ ವಿಧಾನಗಳು ನಡೆದಿದೆ. ಶೃಂಗೇರಿ ಪುರೋಹಿತರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದಿದೆ. ಶಾಸ್ತ್ರೋಕ್ತವಾಗಿ ಈ ದಿನ ಬಹಳ ಒಳ್ಳೆಯ ದಿನ, ಹಾಗಾಗಿ ಈ ದಿನ ಕಟ್ಟಡ ಉದ್ಘಾಟನೆಯಾಗಿದೆ ಅಂದ್ರು.
ಕಟ್ಟಡ ಕಟ್ಟಲು ಜಾಗ ಕೊಟ್ಟವರಿಗೆ ಕೃತಜ್ಞತೆ. ಕೆಲವರು ಜಾಗಕ್ಕೆ ಅಡಚಣೆ ಮಾಡಿದ್ರು. ಅದಕ್ಕೆ ಪಕ್ಷಬೇಧ ಮರೆತು ಕೆಲವರು ನಮ್ಮನ್ನು ಬೆಂಬಲಿಸಿದ್ದಾರೆ. ಎಲ್ಲಾ ಕಾರ್ಯಕರ್ತರಿಗೂ ಇದೇ ಕಚೇರಿಯಲ್ಲಿ ನನ್ನ ಭೇಟಿಗೆ ಅವಕಾಶವಿರಲಿದೆ. ನಾಳೆಯಿಂದಲೇ ಬೆಳಿಗ್ಗೆ 9ರಿಂದ ಮಧ್ಯಾಹ್ನದವರೆಗೆ ಇದೇ ಜಾಗದಲ್ಲಿ ನಾನು ಕಾರ್ಯಕರ್ತರ ಅಹವಾಲು ಸ್ವೀಕರಿಸುತ್ತೇನೆ ಅಂತ ಹೇಳಿದ್ರು.