ಮಂಡ್ಯ: ಇಡೀ ರಾಜ್ಯದ ಗಮನ ಸೆಳೆದಿರುವ ಮಂಡ್ಯದಲ್ಲಿ ಪ್ರಚಾರ ತಾರಕಕ್ಕೇರಿದೆ. ಒಂದೆಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ನಟರಾದ ದರ್ಶನ್, ಯಶ್ ಭರ್ಜರಿ ಪ್ರಚಾರ ನಡೆಸ್ತಾ ಇದ್ರೆ ಇತ್ತ ಮೊಮ್ಮಗ ನಿಖಿಲ್ ಪರ ಇಂದಿನಿಂದ ಮಾಜಿ ಪ್ರಧಾನಿ ದೇವೇಗೌಡರು ಅಖಾಡಕ್ಕಿಳಿಯಲಿದ್ದಾರೆ. ಮಾಜಿ ಪ್ರಧಾನಿಗಳ ಎಂಟ್ರಿಯಿಂದ ಕ್ಯಾಂಪೇನ್ ಮತ್ತಷ್ಟು ರಂಗು ಪಡೆದಿದೆ.
ಮೊಮ್ಮಗ ನಿಖಿಲ್ಗೆ ಶಕ್ತಿ ತುಂಬಲು ಸ್ವತಃ ದೇವೇಗೌಡರೇ ಕಣಕ್ಕಿಳಿದಿದ್ದು, ಶ್ರೀರಂಗಪಟ್ಟಣ ಮತ್ತು ಕೆಆರ್ ಪೇಟೆಯಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ದರ್ಶನ್, ಯಶ್ ಪ್ರಚಾರದಿಂದ ಅತ್ಯುತ್ಸಾಹದಲ್ಲಿರೋ ಸುಮಲತಾಗೆ ವಿರುದ್ಧವಾಗಿ ಈಗ ಮೊಮ್ಮಗನಿಗೆ ಬಲ ತುಂಬಲು ಸ್ವತಃ ದೇವೇಗೌಡರೇ ಅಖಾಡಕ್ಕೆ ಇಳಿಯುತ್ತಿರುವುದು ನಿಖಿಲ್ಗೆ ಆನೆ ಬಂದಂತಾಗಿದೆ.
ದೇವೇಗೌಡರ ಎಂಟ್ರಿಯಿಂದ ಅಕ್ಷರಶಃ ದರ್ಶನ್, ಯಶ್ ಅಬ್ಬರದ ಪ್ರಚಾರಕ್ಕೆ ಜೆಡಿಎಸ್ ಸೆಡ್ಡು ಹೊಡೆಯಲಿದೆ ಅಂತ ಪಕ್ಷದ ಕಾರ್ಯಕರ್ತರು ವಿಶ್ವಾಸ ವ್ತಕ್ತಪಡಿಸುತ್ತಿದ್ದಾರೆ. ಯಶ್, ದರ್ಶನ್ ಪ್ರಚಾರದಿಂದ ರಂಗೇರಿದ್ದ ಮಂಡ್ಯ ಇಂದು ದೇವೇಗೌಡರ ಆಗಮನದಿಂದ ಮತ್ತಷ್ಟು ರಂಗು ಪಡೆಯಲಿದೆ. ದೇವೇಗೌಡರ ಆಗಮನದ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರು ಫುಲ್ ಖುಷಿಯಾಗಿದ್ದಾರೆ.