ಬೆಂಗಳೂರು: ಸಿಎಂ ಯಡಿಯೂರಪ್ಪ ನಮಗೇನು ಶತ್ರು ಅಲ್ಲ. ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.
ದೇವೇಗೌಡರು ದೂರವಾಣಿಯಲ್ಲಿ ನನ್ನ ಜೊತೆ ಮಾತನಾಡಿದ್ದಾರೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಸಿದ ಮಾಜಿ ಪ್ರಧಾನಿಗಳು, ಯಡಿಯೂರಪ್ಪನವರ ಜೊತೆ ಯಾವುದೇ ರಾಜಕೀಯ ಸಂಭಾಷಣೆ ನಡೆಸಿಲ್ಲ. ಪುಸ್ತಕ ಮೇಳಕ್ಕೆ ಸಂಬಂಧಿಸಿದಂತೆ ನಾನೇ ಫೋನ್ ಮಾಡಿ ಡಿಸಿಎಂ ಅಶ್ವಥ್ ನಾರಾಯಣ ಮತ್ತು ಸಿಎಂ ಯಡಿಯೂರಪ್ಪನವರ ಮಾತನಾಡಿದ್ದೇನೆ. ಅದಕ್ಕಿಂತ ಹೆಚ್ಚಿನದ್ದು ಮಾತನಾಡೋದು ಏನು ಇಲ್ಲ. ಮಾತನಾಡುವ ಸಂದರ್ಭ ಸಹ ಬಂದಿಲ್ಲ ಎಂದರು.
ಸಾರ್ವತ್ರಿಕ ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ. ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಹೋರಾಟ ಮಾಡುತ್ತೇವೆ. ಜನತಂತ್ರ ವ್ಯವಸ್ಥೆಯಲ್ಲಿ ದೇವೇಗೌಡರು ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರ ವಿರೋಧಿ ಎಂಬ ಭಾವನೆ ಬೇಡ ಎಂದು ಹೇಳಿದರು.
ನನ್ನ ಹೇಳಿಕೆಗಳಿಗೆ ನಾನು ಬದ್ಧನಾಗಿರುತ್ತೇನೆ. ಯಡಿಯೂರಪ್ಪ ನಮಗೇನು ಶತ್ರು ಅಲ್ಲ. ಹಿಂದೆ ಸಿದ್ದರಾಮಯ್ಯ ಜೊತೆಗೂಡಿ ಹೋರಾಟ ಮಾಡಿದ್ದೇವೆ. ಕೆಲವು ಸಂದರ್ಭದಗಳಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೇವೆ. ರಾಜಕೀಯದಲ್ಲಿ ಯಾವಾಗಲೂ ಶತ್ರುಗಳು ಆಗಲ್ಲ, ಮಿತ್ರರೂ ಆಗಲ್ಲ. ಆಯಾ ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯವಾಗಿ ಮಾತಾಡಿರುತ್ತೇವೆ. ಸಿದ್ದರಾಮಯ್ಯ ನನಗೆ ಏನು ಆ ಜನ್ಮ ಶತ್ರು ಅಲ್ಲ. ರಾಜಕೀಯ ಬದಲಾವಣೆಯಲ್ಲಿ ಇದೆಲ್ಲ ಸಾಮಾನ್ಯ ಎಂದು ತಿಳಿಸಿದರು.