-ತೇಜಸ್ವಿ ಸೂರ್ಯ ಉದಯೋನ್ಮುಖ ನಾಯಕ
ಬೆಂಗಳೂರು: ಕುರ್ಚಿ ಮುಖ್ಯ ಆದಾಗ ರಾಜ್ಯದ ಜನತೆ ಮುಖ್ಯ ಆಗುವುದಿಲ್ಲ. ಈಗ ಸಿಎಂ ಯಡಿಯೂರಪ್ಪರಿಗೆ ಕುರ್ಚಿ ಅನಿವಾರ್ಯವಾಗಿದ್ದರಿಂದ ದೆಹಲಿಗೆ ಹೋಗಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹದಿಂದ ಇಂತಹ ಕೆಟ್ಟ ದುಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಜನರು ನಿತ್ಯ ಕಣ್ಣೀರು ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇದು ಏನ್ರೀ, ಯಡಿಯೂರಪ್ಪ ಹೇಗೆ ಕುರ್ಚಿ ಉಳಿಸಿಕೊಳ್ಳಬೇಕು ಎಂಬ ಹಿಂಸೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರು ದೆಹಲಿಗೆ ಹೋಗಿದ್ದಾರೆ ಎಂದು ಹರಿಹಾಯ್ದರು.
ಸಂಸದ ತೇಜಸ್ವಿ ಸೂರ್ಯರನ್ನು ಹೊಗಳುವ ಮೂಲಕ ಯಡಿಯೂರಪ್ಪರನ್ನು ತೆಗಳಿದ ಅವರು, ತೇಜಸ್ವಿ ಸೂರ್ಯ ಅವರ ಬದ್ಧತೆ ನನಗೆ ಇಷ್ಟ ಆಯ್ತು. ರಾಜ್ಯದ ಜನರ ಬಗ್ಗೆ ಇರುವ ಅವರ ಕಾಳಜಿ ನನಗೆ ಇಷ್ಟ ಆಯಿತು. ನನ್ನಿಂದ ಅವರಿಗೆ ಪ್ರಮಾಣ ಪತ್ರ ಕೊಡುವ ಅಗತ್ಯತೆ ಇಲ್ಲ. ರಾಜ್ಯದ ಜನತೆ ನನಗೆ ಮುಖ್ಯ, ತೀವ್ರ ತರವಾದ ಆಕ್ರೋಶ ಅವರ ಮಾತಿನಲ್ಲಿತ್ತು. ಉದಯೋನ್ಮುಖ ನಾಯಕರಿಗೆ ಇಂತಹ ಭಾವನೆ ಇರಬೇಕಾಗಿರುವುದು ಅಗತ್ಯ. ಪಕ್ಷ ಯಾವುದಾದರೂ ಇರಲಿ. ಅವರ ಬದ್ಧತೆ ನನಗೆ ಇಷ್ಟ ಆಯಿತು. ಆದರೆ ಯಡಿಯೂರಪ್ಪನವರಿಗೆ ರಾಜ್ಯದ ಜನರ ಪರವಾಗಿ ಬದ್ಧತೆ ಇಲ್ಲ. ಕುರ್ಚಿ ಮೇಲೆ ಚಿಂತೆ ಇದೆ ಎಂದು ವಾಗ್ದಾಳಿ ನಡೆಸಿದರು.
ಹೈ ಕೋರ್ಟ್ ಆದೇಶ ಇದ್ದರು ಕಾಂಗ್ರೆಸ್ ಸ್ನೇಹಿತರ ತೃಪ್ತಿಗೋಸ್ಕರ ಒಬ್ಬರನ್ನು ಘನ ಸರ್ಕಾರ ಅಮಾನತು ಮಾಡಿದೆ. ಬೆಳಗ್ಗೆ ಕಾಂಗ್ರೆಸ್, ಮಧ್ಯಾಹ್ನ ಬಿಜೆಪಿಗೆ ಹೋಗುವವರು ಮಂಡ್ಯದಲ್ಲಿ ತುಂಬಾ ಜನ ಇದ್ದಾರೆ. ಅವರಿಗೆ ತೃಪ್ತಿ ಮಾಡಲು ದೆಹಲಿಗೆ ಹೋಗುವ ಮುನ್ನ ಅಮಾನತು ಮಾಡಿ ಹೋಗಿದ್ದಾರೆ. ಯಡಿಯೂರಪ್ಪನವರಿಗೆ ಧನ್ಯವಾದ ಎಂದು ದೇವೇಗೌಡರು ಕಿಡಿಕಾರಿದರು. ಅಲ್ಲದೆ, ಹೆಸರು ಹೇಳದೆ ನಾರಾಯಣಗೌಡ ಮತ್ತು ಚೆಲುವರಾಯಸ್ವಾಮಿ ವಿರುದ್ಧ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.