ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರದ ವಿಚಾರದಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಮಾನ್ಯ ಎಚ್.ಡಿ.ದೇವೇಗೌಡರು (HD Devegowda) ಪ್ರಸ್ತಾಪ ಮಾಡಿದ್ದು ಸರಿ ಇದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಕರ್ನಾಟಕದಲ್ಲಿ ದಲಿತರ ದುರ್ಬಳಕೆ, ಅಧಿಕಾರಿಗಳ ಆತ್ಮಹತ್ಯೆ, ಭ್ರಷ್ಟಾಚಾರ ಮಿತಿ ಮೀರಿರುವುದು, 136 ಶಾಸಕರಿದ್ದರೂ ಅಭದ್ರತೆಯ ವಾತಾವರಣ ಸಂಬಂಧಿತ ದೇವೇಗೌಡರ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆಯವರು ಆಕ್ಷೇಪ ಎತ್ತಲು ಯಾವುದೇ ಕಾರಣ ಇಲ್ಲ. ದಲಿತರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ಸಿನ ವಿರುದ್ಧವಾಗಿ ಮಾನ್ಯ ಖರ್ಗೆಜೀ ಅವರೇ ಮಾತನಾಡಬೇಕಿತ್ತು ಎಂದು ಛಲವಾದಿ ಅಭಿಪ್ರಾಯಪಟ್ಟರು.
ದಲಿತರ ಪರವಾಗಿ ಮಾತನಾಡಲು ಅವರಿಗೆ ಬಾಯಿಯೇ ಬರುತ್ತಿಲ್ಲ. ಆದರೆ ದೇವೇಗೌಡರು (Devegowda) ದಲಿತ ಸಮುದಾಯಗಳ ಬಗ್ಗೆ ಆಗಿರುವ ಅನ್ಯಾಯ ಸರಿಪಡಿಸಲು ರಾಜ್ಯಸಭೆಯಲ್ಲಿ ಸಮಯೋಚಿತವಾಗಿ ಮಾತನಾಡಿದ್ದಾರೆ ಎಂದು ತಿಳಿಸಿದರು. ಇದೊಂದು ಭಂಡತನದ ಸರಕಾರ. ಮಾನ್ಯ ಮುಖ್ಯಮಂತ್ರಿಗಳು ಯಾವುದಕ್ಕೂ ಸಮರ್ಪಕ ಉತ್ತರ ಕೊಡುವುದಿಲ್ಲ ಎಂದು ಟೀಕಿಸಿದರು.
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ನುಂಗಲಾಯಿತು. ಪರಿಶಿಷ್ಟ ಜಾತಿ- ಪರಿಶಿಷ್ಟ ವರ್ಗಗಳಿಗೆ ಇಟ್ಟಿದ್ದ ಹಣ 25 ಸಾವಿರ ಕೋಟಿ ರೂ. ಹಣವನ್ನು ಇದೇ ಕಾಂಗ್ರೆಸ್ ಸರಕಾರ ನುಂಗಿದೆ. ಖರ್ಗೆಯವರು ಇದರ ಬಗ್ಗೆ ಯಾಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು. ಇವತ್ತಿನ ವರೆಗೆ ಚಕಾರ ಎತ್ತಿಲ್ಲ. ನೀವು ಯಾರ ಪರ ಇದ್ದೀರಿ ಎಂದು ಕೇಳಿದರು. ಅದು 187 ಕೋಟಿ ಅಲ್ಲ; ಬರೀ 87 ಕೋಟಿ ಎಂದೇ ಮುಖ್ಯಮಂತ್ರಿಗಳು ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಅಂದ ಮೇಲೆ ಸತ್ಯವನ್ನು ಒಪ್ಪಿಕೊಂಡರಲ್ಲವೇ? ಈ ಸತ್ಯ ಒಪ್ಪಿಕೊಳ್ಳಲು ಖರ್ಗೆಜೀ ಅವರಿಗೆ ಏನಾಗಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಆತ್ಮಹತ್ಯೆ ಪತ್ರ ಬರೆದಿಟ್ಟು ಚಂದ್ರಶೇಖರ್ ಅವರು ತೀರಿಕೊಂಡರು. ಇನ್ನೂ ಅನೇಕರು ಪ್ರಾಣತ್ಯಾಗ ಮಾಡಿದ್ದಾರೆ. ಎಸ್ಐ ಪರಶುರಾಂ ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರ, ಮನೆಯವರಿಗೆ ಕೆಲಸ ಕೊಡುವುದಾಗಿ ಗೃಹಸಚಿವರೇ ತಿಳಿಸಿದ್ದರು. ಇಲ್ಲಿನವರೆಗೆ ಕೂಡ ಒಂದೇ ಒಂದು ನಯಾಪೈಸೆ ಕೊಟ್ಟಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದರು.
ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಗುರುವಾರ ಮಾತನಾಡಿದ ದೇವೇಗೌಡರು, ಲೋಕಸಭೆಯಲ್ಲಿ ಬಿಜೆಪಿಗೆ ಸಿಕ್ಕಿರುವುದು 240 ಸ್ಥಾನಗಳಷ್ಟೇ ಎಂದು ಕಾಂಗ್ರೆಸ್ ನಾಯಕರು ಲೇವಡಿ ಮಾಡುತ್ತಿದ್ದಾರೆ. ಆದರೆ, ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದುಕೊಂಡಿದೆ. ಅದರಿಂದ ಉಪಯೋಗವೇನು? ಕರ್ನಾಟಕದಲ್ಲಿ ಇರುವುದು ಅತ್ಯಂತ ಭ್ರಷ್ಟ ಸರಕಾರ ಎಂದು ಗುಡುಗಿದ್ದರು.