ಬೆಂಗಳೂರು: ವಿರೋಧ ಪಕ್ಷದಲ್ಲಿದ್ದಾಗ ಅಪ್ಪ-ಮಕ್ಕಳನ್ನು ರಾಜಕೀಯವಾಗಿ ಮುಗಿಸೋದೇ ನನ್ನ ಗುರಿ ಅಂತಿದ್ದ ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಸಾಫ್ಟ್ ಕಾರ್ನರ್ ಬೆಳೆಸಿಕೊಂಡಿದ್ದಾರೆ. ಇತ್ತ ಜೆಡಿಎಸ್ ವರಿಷ್ಠರಾದ ದೇವೇಗೌಡರೇ ಯಡಿಯೂರಪ್ಪ ಅವರಿಗೆ ಫೋನ್ ಮಾಡಿ ಮೈತ್ರಿ ಆಫರ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಮತ್ತೆ ಮಹಾಮೈತ್ರಿ ಅಸ್ತಿತ್ವಕ್ಕೆ ಬರುತ್ತಾ ಅನ್ನೋ ಚರ್ಚೆ ಶುರುವಾಗಿವೆ.
ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಸರ್ಕಾರ ಬೀಳಿಸಲ್ಲ, ಕೆಲಸ ಮಾಡಲು ಸಮಯ ನೀಡೋಣ ಎಂಬ ಮಾತು ಈಗಾಗಲೇ ರಾಜ್ಯ ರಾಜಕೀಯದಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾಗಿತ್ತು. ಯಡಿಯೂರಪ್ಪನವರ ಬಗ್ಗೆ ಕುಮಾರಸ್ವಾಮಿ ಅವರ ಸಾಫ್ಟ್ ಕಾರ್ನ್ ಆಗಿದ್ದು, ರಾಜ್ಯದಲ್ಲಿ ಹೊಸ ಬೆಳವಣಿಗೆ ನಡೆಯುತ್ತೆ ಅನ್ನೋ ಮಾತುಗಳು ಕಳೆದೊಂದು ವಾರದಿಂದ ಜೋರಾಗಿಯೇ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಮಹಾ ಬೆಳವಣಿಗೆಯೊಂದು ನಡೆದಿದೆ.
ದೇವೇಗೌಡರ ಜೊತೆ ಫೋನ್ ನಲ್ಲಿ ಮಾತುಕತೆ ನಡೆಸಿದ್ದೇನೆ ಎಂದು ಸಿಎಂ ಹೇಳಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ಮಾತು ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹಾಮೈತ್ರಿಯ ಮುನ್ಸೂಚನೆ ನೀಡಿದೆ. ದೇವೇಗೌಡರು ಯಡಿಯೂರಪ್ಪ ಅವರಿಗೆ ಮೈತ್ರಿ ಆಫರ್ ನೀಡಿದ್ದಾರೆ. ಇದಕ್ಕೆ ಸಿಎಂ ಯಡಿಯೂರಪ್ಪ ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಹೆಚ್ಡಿ ಕುಮಾರಸ್ವಾಮಿ ವಿದೇಶದಲ್ಲಿದ್ದಾಗಲೇ ಮಹಾಮೈತ್ರಿಯ ಮಾತುಕತೆ ನಡೀತಾ? ಇತ್ತ ಬಿಜೆಪಿ ಹೈಕಮಾಂಡ್ನ ಒಪ್ಪಿಗೆ ಇಲ್ಲದೇ ಇಬ್ಬರ ನಡುವಿನ ಮಾತುಕತೆ ಹೇಗೆ ಸಾಧ್ಯ ಅಂತಾ ಎರಡೂ ಪಕ್ಷಗಳಲ್ಲೂ ಚರ್ಚೆ ಶುರುವಾಗಿದೆ.
ರಾಜ್ಯದಲ್ಲಿ ಮತ್ತೆ ಮೈತ್ರಿಯಾದ್ರೆ ಬಿಎಸ್ವೈ ಲೆಕ್ಕಾಚಾರ ಏನು?
* ಉಪಚುನಾವಣೆಯಲ್ಲಿ ವ್ಯತಿರಿಕ್ತ ಫಲಿತಾಂಶ ಬಂದರೆ ಬಿಜೆಪಿಗೆ ಜೆಡಿಎಸ್ ಬೆಂಬಲ ಅನಿವಾರ್ಯ.
* ಬೈಎಲೆಕ್ಷನ್ನಲ್ಲಿ ನಿರೀಕ್ಷಿಸಿದಷ್ಟು ಸ್ಥಾನ ಬರದಿದ್ದರೆ ಜೆಡಿಎಸ್ ಜೊತೆ ದೋಸ್ತಿ?
* ಈ ಮೂಲಕ ತಮ್ಮ ಸರ್ಕಾರ ಡೇಂಜರ್ ಝೋನ್ನಲ್ಲಿಲ್ಲ ಅನ್ನೋ ಸ್ಪಷ್ಟ ಸಂದೇಶ ರವಾನೆಗೆ ಬಿಎಸ್ವೈ ಚಿಂತನೆ.
* ಬಿಜೆಪಿಯಲ್ಲಿ ಬಿಎಸ್ವೈ ವಿರೋಧಿ ಬಣಕ್ಕೆ ಸರ್ಕಾರ ಸೇಫ್ ಅಂತಾ ಮೆಸೇಜ್ ಪಾಸ್ ಮಾಡಲು ಅನುಕೂಲಕರ.
* ಜೆಡಿಎಸ್ ಬಾಹ್ಯ ಬೆಂಬಲ ಕೊಟ್ರೆ ಸರ್ಕಾರ ಸೇಫ್. ಜೊತೆಗೆ ಅಧಿಕಾರ ಹಂಚಿಕೆ ಸಮಸ್ಯೆ ಇಲ್ಲ
ಮಹಾಮೈತ್ರಿಯಾದರೆ ದೇವೇಗೌಡರ ಲೆಕ್ಕಾಚಾರ ಏನು?
* ಪಕ್ಷದ ಶಾಸಕರ ಹಿತದೃಷ್ಟಿಯಿಂದ ಜೆಡಿಎಸ್ನಿಂದಲೇ ಬಾಹ್ಯಮೈತ್ರಿಗೆ ಒಲವು.
* ಸರ್ಕಾರ ರಚಿಸುವ ಸಿದ್ದರಾಮಯ್ಯ ಕನಸಿಗೆ ಬ್ರೇಕ್ ಹಾಕಲು ಜೆಡಿಎಸ್ ತಂತ್ರ.
* ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಗಿದ ಅಧ್ಯಾಯ ಅನ್ನೋ ಸ್ಪಷ್ಟ ಸಂದೇಶ ರವಾನೆ.
* ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಪಕ್ಷದ ಶಾಸಕರನ್ನು ಹಿಡಿದಿಡುವ ಪ್ಲಾನ್.
* ಸಮ್ಮಿಶ್ರ ಸರ್ಕಾರದಲ್ಲಿ ಆಗದ ಕೆಲಸವನ್ನು ಬಿಜೆಪಿ ಸರ್ಕಾರದಲ್ಲಿ ಮಾಡಿಕೊಟ್ಟು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ತಂತ್ರ.
* ಶಾಸಕರಿಗೆ ಅನುಕೂಲವಾಗಲಿದೆ ಅನ್ನೋದು ಜೆಡಿಎಸ್ ಲೆಕ್ಕಾಚಾರ
* ಪುತ್ರ ಕುಮಾರಸ್ವಾಮಿಯ ನಿರ್ಲಕ್ಷ್ಯ ಧೋರಣೆಗೆ ಈ ಮೈತ್ರಿ ಮೂಲಕ ದೇವೇಗೌಡರ ಖಡಕ್ ಉತ್ತರ.
ಒಟ್ಟಾರೆಯಾಗಿ ಸಿಎಂ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಹಲವು ಚರ್ಚೆಗಳು ಆರಂಭಗೊAಡಿವೆ. ಕಾಂಗ್ರೆಸ್ ಗೆ ಟಕ್ಕರ್ ನೀಡಿ ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುತ್ತಾ? ಉಪ ಚುನಾವಣೆ ಫಲಿತಾಂಶದ ನಂತರವೇ ಈ ಕುರಿತ ಬೆಳವಣಿಗೆಗಳು ನಡೆಯುತ್ತಾ ಎಂಬಿತ್ಯಾದಿ ಲೆಕ್ಕಾಚಾರದ ಮಾತುಗಳು ಎರಡೂ ಪಕ್ಷಗಳ ಅಂಗಳದಲ್ಲಿ ಬಲವಾಗಿ ಕೇಳಿ ಬರುತ್ತಿವೆ.