ಮೈಸೂರು: ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಮೈಸೂರಿನಲ್ಲಿ ಬಿಜೆಪಿಗೆ ಮತ ನೀಡಿ ಎಂದು ಬಾಯ್ತಪ್ಪಿ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.
ನಗರದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ, ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹಾಗೂ ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧೃವನಾರಾಯಣ್ ಅವರನ್ನು ಗೆಲ್ಲಿಸಿ ಎಂದು ಭಾಷಣ ನಡುವೆ ಬಾಯ್ತಪ್ಪಿ ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಇಂದು ಗಂಗಾವತಿಯಲ್ಲಿ ಮಾತನಾಡಿ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾನು ಸನ್ಯಾಸಿ ಆಗುವುದಕ್ಕೆ ಹುಟ್ಟಿಲ್ಲ. ನಾನು ಸದಾ ರಾಜಕಾರಣಿಯಾಗಿದ್ದು, ಕೊನೆಯ ಉಸಿರು ಇರುವವರೆಗೂ ರಾಜಕಾರಣದಲ್ಲಿ ಇರುತ್ತೇನೆ. ಗಂಗಾವತಿಯಲ್ಲಿ ಪ್ರಧಾನಿಗಳು ನನ್ನ ಮೇಲೆ ಮಾಡಿರುವ ಟೀಕೆಗೆ ಉತ್ತರ ಕೊಡುವ ಶಕ್ತಿ, ಯೋಗ್ಯತೆ ಎರಡು ನನಗೆ ಇದೆ ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಮೋದಿ ಅವರ ಬಗ್ಗೆ ಹೇಗೆ ಪ್ರಚಾರ ನೀಡುತ್ತಾರೆ ಎಂಬುವುದನ್ನು ನಾನು ತಿಳಿದುಕೊಂಡಿದ್ದೇನೆ. ಆದರೆ ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಇದ್ದಾರೆ. ಅವರ ಸೋಲಿಗೆ ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ ಎಂದರು.