ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಮತದಾನಕ್ಕೆ ಕೆಲ ದಿನಗಳು ಬಾಕಿ ಇದ್ದು, ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯವನ್ನು ಹೆಚ್ಚಿಸಿದೆ. ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಈಗಿನ ಯುವಕರು ಮೋದಿ, ಮೋದಿ ಅಂತಿದ್ದಾರೆ. ಆದರೆ ನಾನು ನೋಡದ ಮೋದಿನಾ ಎಂದು ಹೇಳಿ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜನರ ಆಶೀರ್ವಾದದಿಂದ ನಾನು ಪಾರ್ಲಿಮೆಂಟ್ ಹೋಗೋದು ಸತ್ಯ. ಮೋದಿ ಅವರನ್ನು ಎದುರಿಸುವ ಕಿಚ್ಚು ಈ ರೈತನ ಮಗನಿಗೆ ಇದೆ. ಸ್ವರ್ಗವನ್ನ ಈ ದೇಶಕ್ಕೆ ತರುತ್ತೇನೆ ಎಂದ ಆ ಮನುಷ್ಯ ರೈತರಿಗೆ ಏನು ಮಾಡಿದ್ದಾರೆ. ಮೋದಿ ಸೈನಿಕರಿಗೆ ಶೂ, ಬಟ್ಟೆ ಜಾಕೆಟ್ ಇರಲ್ಲಿಲ್ಲ ನಾವು ಕೊಟ್ಟೆವು ಅಂತಿದ್ದಾರೆ. ವಾಜಪೇಯಿ ಇದ್ದಾಗ ಕಾರ್ಗಿಲ್ ಯುದ್ದ ಮಾಡುವಾಗ ನಮ್ಮ ಸೈನಿಕರಿಗೆ ಏನು ಇರಲಿಲ್ವಾ ಎಂದು ಪ್ರಶ್ನೆ ಮಾಡಿ, ಸೈನಿಕರಿಗೆ ನಾವೇ ಎಲ್ಲವನ್ನು ನೀಡಿದ್ದೇವೆ ಎನ್ನುವವರಿಗೆ ನಾಚಿಕೆ ಆಗಬೇಕು ಎಂದರು.
ಯುವಕರು ಸಾಮಾಜಿಕ ಜಾಲತಾಣಗಳ ಹಿಂದೆ ಬಿದ್ದು ಮೋಸ ಹೋಗಬಾರದು. ನಾವೇ ಯುದ್ಧ ಮಾಡಿದ್ದು ಎಂದು ಮಾಧ್ಯಮಗಳನ್ನು ಮುಂದಿಟ್ಟುಕೊಂಡು ಬೊಬ್ಬೆ ಹಾಕುತ್ತಿದ್ದಾರೆ. ಏನು ಇವರೊಬ್ಬರೇ ಯುದ್ಧ ಮಾಡಿದರಾ ಎಂದು ಪ್ರಶ್ನಿಸಿದರು. ಅಲ್ಲದೇ ಈ ಹಿಂದೆ ಹಿಂದೆ ಕಾಂಗ್ರೆಸ್ ಬೇರೆ ಪಕ್ಷಗಳು ಇದ್ದಾಗಲೂ ದೇಶದಲ್ಲಿ ಯುದ್ಧ ನಡೆದಿದೆ. ಇದು ಸೈನ್ಯದ ಶಕ್ತಿ ಹಾಗೂ ಸಾಮಥ್ರ್ಯ ಆಗಿದ್ದು, ಇದರಿಂದ ರೈತರ ಮಕ್ಕಳು ಮೋಸ ಹೋಗಬಾರದು. ಈ ದೇಶ ಆಳುವ ಶಕ್ತಿ ನಮಗೆ ಅಥವಾ ಸಿದ್ದರಾಮಯ್ಯ ರಂತಹ ನಾಯಕರಿಗೆ ಇಲ್ವಾ ಎಂದರು.
ಏನೋ ದೊಡ್ಡದಾಗಿ ಕಡಿದು ಕಟ್ಟೆ ಹಾಕಿದ್ದೇನೆಂದು ಮಾಧ್ಯಮಗಳನ್ನು ಮುಂದಿಟ್ಟುಕೊಂಡು ಮೋದಿ-ಮೋದಿ ಅಂತರೆ ಎಂದು ದೇವೇಗೌಡರು ತಲೆ ಚಚ್ಚಿಕೊಂಡರು. ನಾಲ್ಕು ವರ್ಷದ ಹಿಂದ ರಾಹುಲ್ ಏನೂ ಪ್ರಯೋಜನವಿಲ್ಲ ಎಂದು ಬಿಂಬಿಸಿದ್ದಾರೆ. ಆತ ಇಂದು ರಫೆಲ್ನಲ್ಲಿ 30 ಸಾವಿರ ಕೋಟಿ ಅಕ್ರಮ ಮಾಡಿದ್ದಾರೆ ಎಂದು ಸವಾಲು ಮಾಡುತ್ತಾರೆ. ಈ ಸಂದರ್ಭದಲ್ಲಿ ಈ ಮನುಷ್ಯ ಪಾರ್ಲಿಮೆಂಟ್ ಒಳಗೆ ಬರಲಿಲ್ಲ ಎಂದು ವ್ಯಂಗ್ಯವಾಡಿದರು.