– ಚಿತ್ರದುರ್ಗದಲ್ಲಿ ಸಿಡಿಲಿಗೆ ಮೂವರ ಬಲಿ
– ರಾಮನಗರದಲ್ಲೂ ಆಲಿಕಲ್ಲು ಹೊಡೆತಕ್ಕೆ ವಾಹನ ಸವಾರರ ಪರದಾಟ
ಚಿಕ್ಕಬಳ್ಳಾಪುರ: ಗುಡುಗು-ಮಿಂಚು ಸಹಿತ ಭಾರೀ ಮಳೆಗೆ ಭಾರೀ ಗಾತ್ರದ ಅಲಿಕಲ್ಲುಗಳು ಬಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಅಗಲಗುರ್ಕಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾರಾಯಣಸ್ವಾಮಿ ಎಂಬುವರ ತೋಟದಲ್ಲಿ ಭಾರೀ ಗಾತ್ರದ ಅಲಿಕಲ್ಲುಗಳು ಬಿದ್ದಿವೆ. ಸರಿ ಸುಮಾರು 5 ರಿಂದ 10 ಕೆಜಿ ತೂಕದ ಆಲಿಕಲ್ಲುಗಳನ್ನ ಕಂಡ ಜನ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಭಾರೀ ಗುಡುಗು-ಮಿಂಚು ಸಹಿತ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಬಿದ್ದಿದ್ದು, ಈ ವೇಳೆ ಭಾರೀ ಗಾತ್ರದ ಆಲಿಕಲ್ಲುಗಳು ಪ್ರತ್ಯಕ್ಷವಾಗಿವೆ.
ರೇಷ್ಮೆ ನಗರ ರಾಮನಗರದಲ್ಲೂ ವರುಣನ ಆರ್ಭಟ ಆರಂಭವಾಗಿದ್ದು, ಗುಡುಗು, ಸಿಡಿಲು ಹಾಗೂ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಸಣ್ಣ ಸಣ್ಣ ಆಲಿಕಲ್ಲು ಹೊಡೆತಕ್ಕೆ ವಾಹನ ಸವಾರರ ಪರದಾಡಿದ್ದಾರೆ. ಒಟ್ಟಿನಲ್ಲಿ ಬಿಸಿಲಿನ ತಾಪಕ್ಕೆ ಬೆಂದು ಹೋಗಿದ್ದ ಜಿಲ್ಲೆಯ ಜನರ ಮುಖದಲ್ಲಿ ಸಂತೋಷ ಗರಿಗೆದರಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಹಿನ್ನಿರಿನಲ್ಲಿ ಈಜಲು ಹೋಗಿದ್ದ ಮೂವರಿಗೆ ಸಿಡಿಲು ಬಡಿದು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಹಿರಿಯೂರಿನ ವಾಣಿವಿಲಾಸ ಸಾಗರದ ಹಿನ್ನೀರಿನಲ್ಲಿ ಘಟನೆ ನಡೆದಿದೆ. ಮೃತ ದುರ್ದೈವಿಗಳನ್ನು ಉಪನ್ಯಾಸಕ ಮಲ್ಲೇಶ್ ನಾಯ್ಕ್(30), ಶಿಕ್ಷಕ ಛಾಯಾಪತಿ (29) ಹಾಗೂ ಕಾರು ಚಾಲಕ ಹರೀಶ್(27) ಎನ್ನಲಾಗಿದ್ದು, ಇವರೆಲ್ಲರೂ ಕುರುಬರಹಳ್ಳಿ ತಾಂಡದ ನಿವಾಸಿಗಳು ಎನ್ನಲಾಗಿದೆ. 9 ಜನ ಸ್ನೇಹಿತರ ಜತೆ ಈಜಲು ತೆರಳಿದ್ದ ವೇಳೆ ಇದ್ದಕ್ಕಿದ್ದಂತೆ ಗಾಳಿ, ಮಳೆ ಬಂದು ಅವಘಡ ಸಂಭವಿಸಿದೆ. ಹೊಸ ದುರ್ಗ ಮತ್ತು ಹಿರಿಯೂರು ಪೊಲಿಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.