– ಡಿಕೆಶಿ ಪಕ್ಷ ನಿಷ್ಠರು
ಹಾವೇರಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸದಾ ಪಕ್ಷ ನಿಷ್ಠರು. ಪಕ್ಷದ ಸಿದ್ಧಾಂತ, ನಾಯಕತ್ವ ಮತ್ತು ಕಾರ್ಯಕ್ರಮಕ್ಕೆ ಬದ್ಧರಾಗಿ ಕೆಲಸ ಮಾಡಿದವರು. ಅವರಿಗೆ ಈಗಾಗಲೇ ಪಕ್ಷದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ನೀಡಲಾಗಿದೆ. ಈಗಲೂ ಅವರಿಗೆ ಯಾವುದೇ ಜವಾಬ್ದಾರಿ ಕೊಟ್ರೂ ಅದನ್ನು ಸಮರ್ಥವಾಗಿ ನಿಭಾಯಿಸೋ ಶಕ್ತಿ ಅವರಲ್ಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ. ಹೇಳಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು, ಡಿಕೆಶಿಗೆ ಜವಾಬ್ದಾರಿ ನೀಡುವ ವಿಚಾರದಲ್ಲಿ ಮನಬಂದಂತೆ ಮಾತನಾಡ್ತಿರೋ ಬಿಜೆಪಿಗೆ ಜನರು ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸ್ತಾರೆ. ಜೈಲಿಗೆ ಹೋಗಿ ಬಂದಿರೋ ಅಮಿತ್ ಶಾ ಈ ರಾಷ್ಟ್ರದ ಗೃಹ ಸಚಿವರು, ರಾಷ್ಟ್ರದ ಬಿಜೆಪಿ ಅಧ್ಯಕ್ಷರು. ಇನ್ನು ಬಿಜೆಪಿ ಮುಗಿಸೋದೆ ನನ್ನ ಗುರಿ ಅಂದಿದ್ದ ಸಿಎಂ ಯಡಿಯೂರಪ್ಪ ಸಹ ಜೈಲಿಗೆ ಹೋಗಿ ಬಂದವರು. ಅಂಥವರಿಗೆ ಅಧಿಕಾರ ನೀಡಿರುವ ಬಿಜೆಪಿಗೆ ಈ ಬಗ್ಗೆ ಪ್ರಶ್ನಿಸೋ ನೈತಿಕತೆ ಇಲ್ಲ ಎಂದು ಗುಡುಗಿದರು.
ಇನ್ನು ಸರ್ಕಾರ ಕೆಡವಲ್ಲ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆ ಬಗ್ಗೆ ಮಾತನಾಡಿದ ಉಗ್ರಪ್ಪ, ಸರ್ಕಾರ ಉಳಿಸೋದು, ಕೆಡವೋದು ಯಾವುದೇ ಪಕ್ಷ ಅಥವಾ ಯಾವುದೇ ಮುಖಂಡರ ಕೈಯಲ್ಲಿ ಇಲ್ಲ. ಅದೆಲ್ಲವೂ ಪ್ರಜಾಪ್ರಭುತ್ವದ ಮಾಲೀಕರಾದ ಜನರ ಕೈಯಲ್ಲಿದೆ. ಹೀಗಾಗಿ ಹೇಳಿಕೆಗಳಿಗಾಗಿ ಹೇಳಿಕೆ ನೀಡೋದು ಯಾರಿಗೂ ಶೋಭೆ ತರೋದಿಲ್ಲ. ನಾವ್ಯಾರು ಸರ್ಕಾರ ಕೆಡವಲು ಹೊರಟಿಲ್ಲ ಎಂದು ಹೆಚ್ಡಿಕೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಈ ಬಿಜೆಪಿ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಯಾವಾಗ ತನ್ನ ಆಂತರಿಕ ಗೊಂದಲಗಳಿಂದ ಬೀಳುತ್ತೋ ಗೊತ್ತಿಲ್ಲ. ಇರುವಷ್ಟು ದಿನ ಉತ್ತಮವಾಗಿ ಜನರ ಸೇವೆ ಮಾಡಿ. ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.